ಬೆಂಗಳೂರು-ಮಂಗಳೂರು ವಿಶೇಷ ರೈಲಿಗೆ ಹೆಚ್ಚಾದ ಬೇಡಿಕೆ
ಮಂಗಳೂರು, ಅಕ್ಟೋಬರ್ 16; ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕ ಸಂಪರ್ಕಿಸಲು ಮತ್ತೊಂದು ರೈಲು ಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈಗ ದಸರಾ, ಸಾಲು-ಸಾಲು ರಜೆ ಹಿನ್ನಲೆಯಲ್ಲಿ ಮತ್ತೆ ಈ ಕುರಿತು ಬೇಡಿಕೆ ಇಡಲಾಗಿದೆ.
ದಸರಾ, ದೀಪಾವಳಿ ಸಂದರ್ಭದಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಮಂಗಳೂರಿಗೆ ಮುಂಬೈನಿಂದ ಸಹ ವಿಶೇಷ ರೈಲು ಓಡಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಬೆಂಗಳೂರು- ಮಂಗಳೂರು ನಡುವೆ ವಿಶೇಷ ರೈಲು ಓಡಿಸಬೇಕು ಎಂಬುದು ಬೇಡಿಕೆಯಾಗಿದೆ.

ಮೈಸೂರು ದಸರಾ ಮಾದರಿಯಲ್ಲಿ ಮಡಿಕೇರಿ, ಮಂಗಳೂರು ದಸರಾ ಸಹ ಕರ್ನಾಟಕಲ್ಲಿ ಪ್ರಸಿದ್ಧಿ ಪಡೆದಿದೆ. ದಸರಾ ಸಂದರ್ಭದಲ್ಲಿ ಸಾವಿರಾರು ಜನರು ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುತ್ತಾರೆ. ಆದ್ದರಿಂದ ವಿಶೇಷ ರೈಲು ಓಡಿಸಿ ಎಂದು ನೈಋತ್ಯ ರೈಲ್ವೆಗೆ ಒತ್ತಾಯಿಸಲಾಗಿದೆ.
ಖಾಸಗಿ ಬಸ್ಗಳ ದರ ದುಪ್ಪಟ್ಟು; ಅಕ್ಟೋಬರ್ 21 ರಿಂದ 24ರ ತನಕ ಶನಿವಾರ, ಭಾನುವಾರ, ವಿಜಯದಶಮಿ ಹಿನ್ನಲೆಯಲ್ಲಿ ಸಾಲು ಸಾಲು ರಜೆ ಇದೆ. ಈ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ಜನರ ಸಂಖ್ಯೆಯೂ ಹೆಚ್ಚಿದೆ. ಆದ್ದರಿಂದ ವಿಶೇಷ ರೈಲು ಓಡಿಸಿ ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು-ಮಂಗಳೂರು ನಡುವಿನ ಎಲ್ಲಾ ರೈಲುಗಳು ಈಗಾಗಲೇ ಭರ್ತಿಯಾಗಿವೆ. ವೈಟಿಂಗ್ ಲಿಸ್ಟ್ನಲ್ಲಿ ಇರುವವರಿಗೆ ಟಿಕೆಟ್ ಸಿಗುವುದು ಖಾತ್ರಿ ಇಲ್ಲ. ಮತ್ತೊಂದು ಕಡೆ ಬಸ್, ವಿಮಾನದ ಟಿಕೆಟ್ಗಳಿಗೆ ಸಹ ಭಾರೀ ಬೇಡಿಕೆ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ವಿಶೇಷ ರೈಲು ಓಡಿಸಿ ಎಂದು ಆಗ್ರಹಿಸಲಾಗಿದೆ.
ಬೆಂಗಳೂರು-ಮಂಗಳೂರು ನಡುವಿನ ಅಕ್ಟೋಬರ್ 16ರ ಖಾಸಗಿ ಬಸ್ ಟಿಕೆಟ್ ದರ 650-900 ರೂ. ತನಕ ಇದೆ. ಅಕ್ಟೋಬರ್ 20ರ ದರ 1,600-2000 ರೂ. ತನಕ ಇದೆ. ಇಷ್ಟು ದರ ಕೊಟ್ಟರೂ ಸಹ ಟಿಕೆಟ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಿಶೇಷ ರೈಲು ಓಡಿಸಬೇಕು ಎಂಬುದು ಬೇಡಿಕೆ.
ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ನೈಋತ್ಯ ರೈಲ್ವೆಗೆ ಈ ಕುರಿತು ಮನವಿ ಸಲ್ಲಿಕೆ ಮಾಡಿದೆ. ಬೆಂಗಳೂರು-ಅರಸೀಕೆರೆ-ಮಂಗಳೂರು ಮಾರ್ಗವಾಗಿ ವಿಶೇಷ ರೈಲು ಓಡಿಸಬೇಕು. ಅಕ್ಟೋಬರ್ 20 ರಿಂದ 25ರ ತನಕವಾದರೂ ರೈಲು ಓಡಿಸಬೇಕು ಎಂದು ಮನವಿ ಮಾಡಲಾಗಿದೆ.
ವಿಶೇಷ ರೈಲು ಓಡಿಸಿದರೆ ದುಪ್ಪಟ್ಟು ದರವನ್ನು ನೀಡಿ ಖಾಸಗಿ ಬಸ್ನಲ್ಲಿ ಸಂಚಾರ ನಡೆಸುವುದು ತಪ್ಪಲಿದೆ. ಅಲ್ಲದೇ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುವ ವಾಹನ ದಟ್ಟಣೆಯನ್ನು ಸಹ ಕಡಿಮೆ ಮಾಡಬಹುದು ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಬೆಂಗಳೂರು-ಮಂಗಳೂರು ನಡುವೆ ಸೀಮಿತ ರೈಲುಗಳು ಸಂಚಾರ ನಡೆಸುತ್ತಿವೆ. ಇದರಿಂದಾಗಿ ಹಬ್ಬ, ಸಾಲು ಸಾಲು ರಜೆ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹಿಂದಿನಿಂದಲೂ ಬೆಂಗಳೂರು-ಮಂಗಳೂರು ನಡುವೆ ಮತ್ತೊಂದು ರೈಲಿಗೆ ಬೇಡಿಕೆ ಇಡಲಾಗುತ್ತಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ಅನೇಕ ಜನರು ಉಡುಪಿ, ಉತ್ತರ ಕನ್ನಡ, ಪಕ್ಕದ ಕೇರಳ ರಾಜ್ಯದ ಕಡೆಗೆ ಸಾಗುತ್ತಾರೆ. ಆದ್ದರಿಂದ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲು ಓಡಿಸಿ ಎಂದು ಮನವಿ ಮಾಡಲಾಗಿದೆ.
ಭಾನುವಾರ ನಾಡಹಬ್ಬ ಮೈಸೂರ ದಸರಾಕ್ಕೆ ಸಾಂಸ್ಕೃತಿಕ ನಗರಿಯಲ್ಲಿ ಮೈಸೂರಿನಲ್ಲಿ ಚಾಲನೆ ಸಿಕ್ಕಿದೆ. ಅದೇ ಮಾದರಿಯಲ್ಲಿ ಕಡಲ ನಗರಿ ಮಂಗಳೂರಿನಲ್ಲಿಯೂ ದಸರಾ ಸಂಭ್ರಮ ಆರಂಭವಾಗಿದೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ 10 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಪ್ರಯುಕ್ತ ನಡೆಯಲಿದ್ದು, ಮಂಗಳೂರು ದಸರಾಕ್ಕೆ ಅದ್ದೂರಿಯಾಗಿ ಚಾಲನೆ ದೊರೆತಿದೆ.
ಶ್ರೀಕ್ಷೇತ್ರ ಕುದ್ರೋಳಿಯ ಕೊರಗಪ್ಪ ಸಭಾಂಗಣದಲ್ಲಿ ಶ್ರೀ ಅದ್ದೂರಿ ದರ್ಬಾರ್ ಮಂಟಪದಲ್ಲಿ ಶಾರದಾ ಮಾತೆ, ಶ್ರೀ ಮಹಾಗಣಪತಿ ಹಾಗೂ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಕರ್ಣಾಟಕ ಬ್ಯಾಂಕ್ ಸಿಇಒ ಪ್ರದೀಪ್ ಕುಮಾರ್ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು.
ಹತ್ತು ದಿನಗಳ ಕಾಲ ಮಂಗಳೂರಿನಲ್ಲಿ ದಸರಾ ಸಂಭ್ರಮ ಮೇಳೈಸಲಿದೆ. ಇದನ್ನು ನೋಡಲು ಬೆಂಗಳೂರಿನಲ್ಲಿ ನೆಲೆಸಿರುವ ಅನೇಕರು ಮಂಗಳೂರಿಗೆ ಆಗಮಿಸುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಕುದ್ರೋಳಿ ದಸರಾಕ್ಕೆ ಸಾಕ್ಷಿಯಾಗುತ್ತಾರೆ. ಅಕ್ಟೋಬರ್24 ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ.












Click it and Unblock the Notifications