ಮಂಗಳೂರಲ್ಲಿ ನಡು ರಸ್ತೆಯಲ್ಲೇ ಯುವಕನ ಕೊಲೆ
ಮಂಗಳೂರು, ಮೇ 09 : ಮಂಗಳೂರಿನಲ್ಲಿ ಇಬ್ಬರು ಯುವಕರ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಗೊಂಡ ಮತ್ತೊಬ್ಬ ಯುವಕ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬರ್ಕೆ ಠಾಣೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.
ಭಾನುವಾರ ಸಂಜೆ ನಗರದ ಲಾಲ್ ಬಾಗ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಕೊಲೆಯಾದವರನ್ನು ರೋಹಿತ್ (42) ಎಂದು ಗುರುತಿಸಲಾಗಿದೆ. ಗಾಯಗೊಂಡ ನಂತೂರ್ ಬಳಿಯ ನಿವಾಸಿ ರೋಶನ್ (36) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. [ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

ಕದ್ರಿಯ ಟೀ ಸ್ಟಾಲ್ ಹೊಂದಿದ್ದ ರೋಶನ್ ಸಂಜೆ ಸ್ನೇಹಿತ ರೋಹಿತ್ ಜೊತೆ ಬಿಜೈಯಿಂದ ಎ.ಜೆ. ಆಸ್ಪತ್ರೆಯ ಕಡೆಗೆ ತೆರಳುತ್ತಿದ್ದರು. ಆ ಸಮಯದಲ್ಲಿ ಬಸ್ ನಿಲ್ದಾಣದ ಬಳಿ ಆಟೋದಲ್ಲಿ ಬಂದ ಮೂವರು, ದೊಣ್ಣೆ, ಚೂರಿಯಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. [ಮೈಸೂರು : ಹುಣಸೂರು ಜೋಡಿ ಕೊಲೆ ಸಾಕ್ಷಿಯ ಹತ್ಯೆ]
ಗಂಭೀರವಾಗಿ ಗಾಯಗೊಂಡ ರೋಹಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ರೋಶನ್ ಬೆನ್ನು ಹಾಗೂ ಬಲಗೈ ಬೆರಳುಗಳಿಗೆ ಗಾಯಗಳಾಗಿದ್ದು, ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬರ್ಕೆ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣದ ದಾಖಲಿಸಿಕೊಂಡಿದ್ದಾರೆ.
ಹತ್ಯೆಗೆ ಕಾರಣವೇನು? : ಕೆಲವು ತಿಂಗಳ ಹಿಂದೆ ರೋಹಿತ್ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಸಾಲ ವಸೂಲಿಗೆ ತೆರಳುತ್ತಿದ್ದ. ಕೆಲವು ವಾಹನ ಸಾಲಗಾರರು ಸಾಲ ಮರುಪಾವತಿ ಮಾಡದಿದ್ದಾಗ ಅವರ ವಾಹನಗಳನ್ನು ಮುಟ್ಟುಗೋಲು ಹಾಕುತ್ತಿದ್ದ. ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications