ದತ್ತಮಾಲಾ ಅಭಿಯಾನ:ರಾಜ್ಯದಿಂದ 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ
ಮಂಗಳೂರು, ಡಿಸೆಂಬರ್ 12: ದತ್ತ ಜಯಂತಿ ಅಂಗವಾಗಿ ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತಮಾಲಾ ಅಭಿಯಾನ ಇಂದಿನಿಂದ ಆರಂಭಗೊಂಡು 22 ರವರೆಗೆ ನಡೆಯಲಿದೆ. ಡಿಸೆಂಬರ್ 22 ರಂದು ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಕೈಗೊಳ್ಳಲಿದ್ದಾರೆ.
ಈ ಅಭಿಯಾನದಲ್ಲಿ ರಾಜ್ಯದಿಂದ 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಜರಂಗದಳದ ದಕ್ಷಿಣ ಪ್ರಾಂತದ ಪ್ರಾಂತ ಸಂಯೋಜಕ್ ಸುನಿಲ್ ಕೆಆರ್ ಮಾಹಿತಿ ನೀಡಿದ್ದಾರೆ.
ಕೇಸರಿಮಯವಾದ ಚಿಕ್ಕಮಗಳೂರು:ಇಂದಿನಿಂದ ದತ್ತಮಾಲಾ ಅಭಿಯಾನಕ್ಕೆ ಚಾಲನೆ
ಡಿಸೆಂಬರ್ 20 ರಂದು ದತ್ತಪೀಠದಲ್ಲಿ ಅನುಸೂಯದೇವಿ ಪೂಜೆ , ಗಣಪತಿ ಹೋಮ ಹಾಗೂ ದುರ್ಗಾಹೋಮ ಮುಂಜಾನೆ ನಡೆಯಲಿದ್ದು, ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಮತ್ತು ದತ್ತಪೀಠ ದರ್ಶನ ನಡೆಯಲಿದೆ.
ಈ ಬಾರಿಯ ದತ್ತಮಾಲಾ ಅಭಿಯಾನದಲ್ಲಿ ಮಂಗಳೂರು ಉಡುಪಿ ಪುತ್ತೂರು ಕೊಡಗು ಮತ್ತು ಕೇರಳದ ಕಾಸರಗೋಡು ಜಿಲ್ಲೆಯಿಂದ ಒಟ್ಟು 15000 ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತದ ಪ್ರಾಂತ ಸಂಯೋಜಕ್ ಮುರಳಿ ಹಸಂತಡ್ಕ ತಿಳಿಸಿದ್ದಾರೆ.
ದತ್ತಮಾಲಾ ಅಭಿಯಾನದ ಅಂಗವಾಗಿ ಮಂಗಳೂರಿನಲ್ಲಿಯೂ ನೂರಾರು ಕಾರ್ಯಕರ್ತರು ದತ್ತಮಾಲಾಧಾರಣೆ ಮಾಡುವ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದರು.
ಸ್ಕಂದ ಪಂಚಮಿ ದಿನವಾದ ಇಂದು ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿ ದತ್ತಪೀಠ ಅಭಿಯಾನಕ್ಕೆ ವಿದ್ಯುಕ್ತವಾಗಿ ದತ್ತ ಹೋಮದ ಮುಖಾಂತರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಂತ ಸಂಚಾಲಕ ಸುನಿಲ್ ಕೆ. ರ್ ವಿಭಾಗ ಸಂಚಾಲಕ ಭುಜಂಗ ಕುಲಾಲ್ , ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್ , ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ , ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ , ಕಾರ್ಯದರ್ಶಿ ಶಿವಾನಂದ ಮೆಂಡನ್,ಜಿಲ್ಲಾ ಸಹಸಂಚಾಲಕ ಪುನೀತ್ ಅತ್ತಾವರ, ನವೀನ್ ಮೂಡ್ ಶೆಡ್ಡೆ , ಗುರುಪ್ರಸಾದ್ ಉಳ್ಳಾಲ್, ಪ್ರದೀಪ್ ಸರಿಪಲ್ಲ ಉಪಸ್ಥಿತರಿದ್ದರು.