ಲಾಕ್ಡೌನ್ ಮಾರ್ಗಸೂಚಿ: ಬುದ್ಧಿವಂತರ ಜಿಲ್ಲೆಯಲ್ಲಿ ಹೀಗೇಕೆ?
ಮಂಗಳೂರು, ಜು. 05: ಬೆಂಗಳೂರನ್ನು ಹೊರತು ಪಡಿಸಿದರೆ ಅತಿಹೆಚ್ಚು ಕೋರೊನಾ ವೈರಸ್ ಸೋಂಕಿತರು ಕಲಬುರಗಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗುತ್ತಿದ್ದಾರೆ. ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರಕ್ಕೂ ತಲೆ ನೋವಾಗಿದೆ. ಇಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗಲು ಕಾರಣವೂ ಇದೆ. ಆದರೆ ಪರಿಸ್ಥಿತಿ ಹೀಗಿಯೆ ಮುಂದುವರೆದರೆ ಹೇಗೆ ಎಂಬ ಆತಂಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತರನ್ನು ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಸ್ಥಳೀಯರು ಆತಂಕಗೊಳ್ಳುವಂತಹ ಮತ್ತೊಂದು ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಿನ್ನೆಡೆಯಾಗುವಂತಹ ಘಟನೆಗಳು ನಡೆಯುತ್ತಿವೆ. ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ವೈರಸ್ ಹರಡದಂತೆ ತಡೆಯಲು ಕೈಗೊಂಡಿದ್ದ ಕ್ರಮಗಳಲ್ಲಿ ಇಡೀ ರಾಜ್ಯಕ್ಕೆ ಜಿಲ್ಲೆಯ ಜನರು ಮಾದರಿ ಆಗಿದ್ದರು. ಆದರೆ ದಿನಕಳೆದಂತೆ ಆಗುತ್ತಿರುವುದೇನು?

ಜಿಲ್ಲೆಯಲ್ಲಿ ಸೋಂಕಿತರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ (ಜು. 4) ಒಂದೇ ದಿನ 75 ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೆ ಒಟ್ಟು 1087 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 513 ಜನರು ಗುಣಮುಖರಾಗಿದ್ದಾರೆ. ಇನ್ನೂ 552 ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಮಧ್ಯೆ ಕೊರೊನಾ ವೈರಸ್ಗೆ 20 ಜನರು ಬಲಿಯಾದ್ದಾರೆ. ಆದರೂ ಯುವ ಜನತೆ ಕೋವಿಡ್ 19 ರೋಗವನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಮೆಹಂದಿ ಕಾರ್ಯಕ್ರಮ
ಸದ್ಯ ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಯಮಗಳು ಜಾರಿಯಲ್ಲಿವೆ. ಹೀಗಾಗಿ ಜನರು ಗುಂಪುಗೂಡಿಕೊಂಡು ಯಾವುದೇ ಕಾರ್ಯಕ್ರಮ ಮಾಡಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಮದುವೆ ಶಾಸ್ತ್ರದಲ್ಲಿಯೂ 50ಕ್ಕೆ ಮೀರದಂತೆ ಜನರು ಸೇರಬಾರದು ಎಂದು ಸರ್ಕಾರ ಆದೇಶ ಮಾಡಿದೆ.
ಆದರೆ ಮಂಗಳೂರಿನ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಮದುವೆಯ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾದ ಮೆಹಂದಿ ಕಾರ್ಯಕ್ರಮದಲ್ಲಿ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಕೊರೊನಾ ವೈರಸ್ನ್ನು ಆಹ್ವಾನಿಸುವಂತಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಗುಂಪುಗೂಡಬಾರದು ಎಂಬ ನಿಯಮಗಳನ್ನು ಮುರಿದಿರುವುದು ಕಂಡು ಬಂದಿದೆ.

2 ನೂರಕ್ಕು ಹೆಚ್ಚು ಯುವಕರು
ಬಂಟ್ವಾಳದ ಅಮ್ಮುಂಜೆ ಗ್ರಾಮದಲ್ಲಿ ನಡೆದಿರುವ ಮೆಹಂದಿ ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ತಡೆಯಲು ಸೂಚಿಸಲಾಗಿರುವ ಎಲ್ಲ ನಿಯಮಗಳನ್ನು ಉಲ್ಲಂಘಟನೆ ಮಾಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೋಂಕು ತಗುಲಬಹುದು ಎಂಬ ಕನಿಷ್ಠ ಆತಂಕವೂ ಇಲ್ಲದೆ ಮೆಹಂದಿ ಕಾರ್ಯಕ್ರಮದಲ್ಲಿ ಡಿ.ಜೆ.ಗೆ ಹೆಜ್ಜೆ ಹಾಕಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ.
ಬೇರೆ ಸಂದರ್ಭ ಆಗಿದ್ದರೆ ಮದುವೆಯ ಸಂಭ್ರಮ ಎನ್ನಬಹುದಿತ್ತು. ಆದರೆ ಕೊರೊನಾ ವೈರಸ್ ಕಾಡುತ್ತಿರುವ ಈ ಸಂದರ್ಭದಲ್ಲಿ ಯುವಕರು ಹೀಗೆ ಗುಂಪುಗುಂಪಾಗಿ ನೃತ್ಯ ಮಾಡಿರುವುದು ಸ್ಥಳೀಯರ ಕಂಗೆಣ್ಣಿಗೆ ಗುರಿಯಾಗಿದೆ. ಯುವಕರು ಡ್ಯಾನ್ಸ್ ಮಾಡಿದ್ದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿದೆ. ಲಾಕ್ಡೌನ್ ನಿಯಮದಂತೆ ಮದುವೆಯಲ್ಲಿ 50 ಜನರು ಭಾಗವಹಿಸುತ್ತಾರೆ ಎಂದು ಸ್ಥಳಿಯ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆಯಲಾಗಿತ್ತು ಎಂಬ ಮಾಹಿತಿಯಿಯಿದೆ.

ತನಿಖೆಗೆ ಆದೇಶ
ಕೋವಿಡ್ ನಿಯಮ ಉಲ್ಲಂಘಿಸಿ ಭರ್ಜರಿ ಮೆಹಂದಿ ಕಾರ್ಯಕ್ರಮದಲ್ಲಿ ಯುವಕರು ಸಾಮೂಹಿಕ ಡ್ಯಾನ್ಸ್ ನಲ್ಲಿ ಭಾಗಿಯಾಗಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಸಾಮಾಜಿಕ ಅಂತರ ಉಲ್ಲಂಘನೆ, ಭರ್ಜರಿ ಪಾರ್ಟಿ, 200ಕ್ಕೂ ಹೆಚ್ಚು ಯುವಕರು ಭಾಗಿಯಾಗಿದ್ದು, ಮಾಸ್ಕ್ ಹಾಕದಿರುವುದು, ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್ ತನಿಖೆಗೆ ಆದೇಶಿಸಿದ್ದಾರೆ. ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications