ಕರಾವಳಿಯಲ್ಲಿ ಸೋಮವಾರದಿಂದ ರಂಜಾನ್ ಉಪವಾಸ:ದಕ್ಷಿಣ ಕನ್ನಡ ಖಾಝಿ ಘೋಷಣೆ
ಮಂಗಳೂರು, ಮೇ 06:ಕರಾವಳಿಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಮ್ಜಾನ್ ಉಪವಾಸ ಆರಂಭವಾಗಿದೆ. ರಮ್ಜಾನ್ ತಿಂಗಳ ಚಂದ್ರ ದರ್ಶನ ಭಾನುವಾರ ಆಗಿರುವುದರಿಂದ ಮೇ 6 ರಿಂದ ಮುಸ್ಲೀಮರು ಒಂದು ತಿಂಗಳ ಉಪವಾಸ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯರ್ ಘೋಷಿಸಿದ್ದಾರೆ.
ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸಲು ಉಪವಾಸದಿಂದ ಸಾಧ್ಯವಾಗಲಿ. ರಮ್ಜಾನ್ ಎಂಬುದು ಹಸಿವು, ದಾಹ, ಭಾವನೆಗಳನ್ನು ಅರಿತುಕೊಳ್ಳುವ ತಿಂಗಳಾಗಿದ್ದು, ಮಾನವ ಸೌಹಾರ್ದತೆ ಮತ್ತು ಧರ್ಮಸಹಿಷ್ಣುತೆಗೆ ಈ ತಿಂಗಳು ಒತ್ತು ನೀಡುತ್ತದೆ ಎಂದು ಖಾಝಿ ತಿಳಿಸಿದ್ದಾರೆ.
ರಂಜಾನ್ ತಿಂಗಳಲ್ಲಿ ಮಧುಮೇಹಿಗಳಿಗೆ ವೈದ್ಯರ ಸಲಹೆ
ಈ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ ಮುಸ್ಲಿಮರು ಸ್ವಧರ್ಮವನ್ನು ಅರಿತುಕೊಳ್ಳಲು ಮತ್ತು ಇತರ ಧರ್ಮೀಯರೊಂದಿಗೆ ಸೌಹಾರ್ದ ಸಂಬಂಧ ಗಟ್ಟಿಗೊಳಿಸಲು ಪ್ರಯತ್ನಿಸಬೇಕು. ರಂಜಾನ್ ಸ್ವಶುದ್ಧೀಕರಣದ ತಿಂಗಳು. ನೈತಿಕವಾಗಿ ಮತ್ತು ಮಾನಸಿಕವಾಗಿ ಶುದ್ಧೀಕರಣಗೊಳ್ಳುವ ತಿಂಗಳಾಗಿ ಮುಸ್ಲಿಮರು ಈ ತಿಂಗಳನ್ನು ಸ್ವೀಕರಿಸಲಿ. ನಾಡಿನ ಸಮಸ್ತರಿಗೆ ರಂಜಾನ್ ಶುಭಾಶಯಗಳು ಎಂದು ಖಾಝಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.