ದಂಡೊಲೆ ಗ್ರಾಮದ ಖಾಲಿ ಬಾವಿಯೊಂದರಲ್ಲಿ ಮೊಸಳೆ ಪತ್ತೆ
ಮಂಗಳೂರು, ಜೂನ್ 03: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದ ಗ್ರಾಮವೊಂದರ ಖಾಲಿ ಬಾವಿಯಲ್ಲಿ ಮೊಸಳೆ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ದಂಡೊಲೆಯ ಗ್ರಾಮದಲ್ಲಿನ ದಾಮೋದರ್ ಎಂಬುವರ ಮನೆಯ ಬಾವಿಯಲ್ಲಿ ಈ ಮೊಸಳೆ ಕಾಣ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬಾಳುಗೋಡು ಅರಣ್ಯದಲ್ಲಿ ಗಾಯಗೊಂಡಿದ್ದ ಆನೆ ಸಾವು
ಬೇಸಿಗೆ ಹಿನ್ನೆಲೆಯಲ್ಲಿ ಬಾವಿ ನೀರು ಬತ್ತಿಹೋಗಿದ್ದರಿಂದ ಈ ಮೊಸಳೆ ಕಾಣಿಸಿದೆ. ಈ ಮೂಲಕ ಈ ಭಾಗದ ನೇತ್ರಾವತಿ ನದಿಯಲ್ಲಿ ಮೊಸಳೆಗಳು ವಾಸ್ತವ್ಯವಿರುವುದು ಧೃಡಪಟ್ಟಿದೆ. ನೇತ್ರಾವತಿ ನದಿ ತಟದಲ್ಲಿ ಈ ಗ್ರಾಮವಿದ್ದು, ನದಿಯಿಂದ ಈ ಕಡೆಗೆ ವಲಸೆ ಬಂದ ಮೊಸಳೆ ಈ ಬಾವಿ ಸೇರಿಕೊಂಡಿದೆ ಎಂದು ಶಂಕಿಸಲಾಗಿದೆ. ಮೊಸಳೆ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ನದಿ ತಟದ ಜನರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾವಿಯಲ್ಲಿ ಪತ್ತೆಯಾಗಿರುವ ಮೊಸಳೆಯ ರಕ್ಷಣೆಗೆ ಅರಣ್ಯ ಇಲಾಖೆಯ ಅಧಿಕಾರಿ ಮುಂದಾಗಿದ್ದಾರೆ. ನೇತ್ರಾವತಿ ನದಿಯಲ್ಲಿ ಈವರೆಗೆ ಮೊಸಳೆಗಳಿಲ್ಲ ಎಂದೇ ನಂಬಲಾಗಿತ್ತು. ಆದರೆ ಈಗ ಮೊಸಳೆಯೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲೂ ಮೊಸಳೆಗಳ ವಾಸ್ತವ್ಯವಿದೆ ಎಂದು ಅಂದಾಜಿಸಲಾಗಿದ್ದು ಈ ಕುರಿತು ಶೋಧ ನಡೆಸುವ ಅವಶ್ಯಕತೆಯಿದೆಯೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.