ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಆಸ್ಪತ್ರೆಯಿಂದ ಆಟೋ ಚಾಲಕ ಡಿಸ್ಚಾರ್ಜ್
ಮಂಗಳೂರು, ಜನವರಿ 16: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಗರದ ಗರೋಡಿ ಬಳಿಯಲ್ಲಿ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪುರುಷೋತ್ತಮ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಂದಿನಿಂದ ಶನಿವಾರದವರೆಗೆ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ಕೆ. ತಿಳಿಸಿದ್ದಾರೆ.
ಮಂಗಳೂರು ಕುಕ್ಕರ್ ಬ್ಲಾಸ್ಟ್: ಗಾಯಾಳಿಗೆ ಸರ್ಕಾರದ ಆರ್ಥಿಕ ಭರವಸೆ ಹುಸಿ
ಆದರೆ ಅವರು ಸೋಂಕಿನಿಂದ ರಕ್ಷಿಸಿಕೊಳ್ಳಲು ಇನ್ನೂ ಕನಿಷ್ಠ ಒಂದು ತಿಂಗಳ ಕಾಲ ಮನೆಯಲ್ಲೇ ಉಳಿದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆಂದು ಪುರುಷೋತ್ತಮ ಪೂಜಾರಿ ಮನೆಯವರು ತಿಳಿಸಿದ್ದಾರೆ.
ಗಾಯಗೊಂಡಿದ್ದ ಆಟೋ ಚಾಲಕನ ಮನೆ ದುರಸ್ತಿ ಕಾರ್ಯ
ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದರು. ಆದರೆ ಪರಿಹಾರ ಇನ್ನಷ್ಟೇ ದೊರೆಯಬೇಕಿದೆ. ವೈಯಕ್ತಿಕ ನೆಲೆಯಲ್ಲಿ ಗೃಹ ಸಚಿವರು 50,000 ರೂ. ಮತ್ತು ಸುನಿಲ್ ಕುಮಾರ್ 25,000 ರೂ. ನೆರವು ನೀಡಿದ್ದರು. ಪುರುಷೋತ್ತಮ ಅವರ ಚಿಕಿತ್ಸೆಯ ವೆಚ್ಚವನ್ನು ಇಎಸ್ಐ ಮತ್ತು ಸರ್ಕಾರದ ವತಿಯಿಂದ ಭರಿಸಲಾಗಿದೆ. ಪುರುಷೋತ್ತಮ ಅವರ ಮನೆಯನ್ನುಗುರು ಬೆಳದಿಂಗಳು ಫೌಂಡೇಶನ್ ಮೂಲಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಹೀಗಾಗಿ ಕುಟುಂಬ ಸದ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.
ಪತ್ನಿಯಿಂದ ಪುರುಷೋತ್ತಮ್ ಸೇವೆ
ಪ್ರಸ್ತುತ ನಗರದ ಉಜ್ಜೋಡಿಯಲ್ಲಿ ಪುರುಷೋತ್ತಮ್ ಅವರು ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸದ್ಯ ಮಲಗಿದ್ದಲ್ಲೇ ಇರುವ ಪುರುಷೋತ್ತಮ್ ಅವರಿಗೆ ಅವರ ಪತ್ನಿಯೇ ಊಟ ಸೇರಿದಂತೆ ಅವರ ದೈನಂದಿನ ಚಟುವಟಿಕೆಗೆ ಸಹಾಯ ಮಾಡುತ್ತಿದ್ದಾರೆ. ಬಾಂಬ್ ಸ್ಫೋಟದಿಂದ ಪುರುಷೋತ್ತಮ್ ಅವರ ಕೈಗಳು ಸುಟ್ಟು ಬಲಹೀನವಾಗಿವೆ ಎನ್ನಲಾಗಿದೆ.
ಪ್ರತ್ಯೇಕ ಕೊಠಡಿಯಲ್ಲಿ ಪುರುಷೋತ್ತಮ್ ವಾಸ
ಹೆಚ್ಚು ಮಾತನಾಡಲು ತ್ರಾಣವಿಲ್ಲದೇ ಪುರುಷೋತ್ತಮ್ ಅವರು ಕಂಗಾಲಾಗಿದ್ದಾರೆ. ಮತ್ತೆ ರಿಕ್ಷಾ ಓಡಿಸಲು 6 ತಿಂಗಳಿನಿಂದ ಒಂದು ವರ್ಷವಾದರೂ ಸಮಯ ಬೇಕಾಗಬಹುದು. ಪ್ರಸ್ತುತ ಸುಟ್ಟ ಗಾಯ ಉಲ್ಬಣಿಸದಂತೆ ಜನರಿಂದ ಪ್ರತ್ಯೇಕವಾಗಿ ಕೊಠಡಿಯಲ್ಲಿ ಪುರುಷೋತ್ತಮ್ ವಾಸಿಸುತ್ತಿದ್ದಾರೆ. ಆಟೋ ಚಾಲಕ ವೃತ್ತಿಯನ್ನೇ ನಂಬಿಕೊಂಡಿದ್ದ ಪುರುಷೋತ್ತಮ್ ಅವರಿಗೆ ಈ ಘಟನೆ ನುಂಗಲಾರದ ತುತ್ತಾಗಿದೆ.
ಗಾಡಿಯಿಂದ ಇಳಿದು ಓಡಿದ್ದ ಶಾರೀಕ್
ಘಟನೆಯ ಬಗ್ಗೆ ವಿವರಿಸಿರುವ ಪುರುಷೋತ್ತಮ್, "ನವೆಂಬರ್ 19ರಂದು ಸಂಜೆ ಬಾಡಿಗೆಗೆ ಹೋಗಿದ್ದವನು,
ಕಂಕನಾಡಿ ರೈಲ್ವೆ ನಿಲ್ದಾಣದಿಂದ ಬರುತ್ತಿದ್ದಾಗ ನಾಗುರಿ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಕೈಯಲ್ಲಿ ಬ್ಯಾಗ್ ಹಿಡಿದು ಪಂಪ್ವೆಲ್ಗೆ ಕರೆದೊಯ್ಯುವಂತೆ ತಿಳಿಸಿದ. ಆವನನ್ನು ಕುಳ್ಳಿರಿಸಿಕೊಂಡು ಸ್ವಲ್ಪ ದೂರ ಬರುತ್ತಿದ್ದಂತೆ ಟಫ್ ಅಂತ ದೊಡ್ಡ ಶಬ್ಧ ಅದರ ಬೆನ್ನಿಗೆ ದಟ್ಟ ಹೊಗೆ-ಬೆಂಕಿ ಆವರಿಸಿತು. ಹೊಗೆಯಿಂದಾಗಿ ಏನೂ ಕಾಣದೆ ಹೇಗೋ ರಿಕ್ಷಾವನ್ನು ರಸ್ತೆ ಪಕ್ಕ ತಂದು ನಿಲ್ಲಿಸಿದೆ. ಬಾಂಬ್ ಸ್ಫೋಟಿಸಿದ ಯುವಕ ರಿಕ್ಷಾದಿಂದ ಹೊರಗೋಡಿದ. ಅಲ್ಲಿನ ಯುವಕರು ಸುಟ್ಟ ಗಾಯ ಹೆಚ್ಚಾಗದಂತೆ ಆತನ ಅಂಗಿ ತೆಗೆದು ಉಪಚರಿಸಿದರು. ಬಳಿಕ ನನ್ನನ್ನು ಆಸ್ಪತ್ರೆಗೆ ಕೊಂಡುಹೋದರು" ಎಂದು ತಿಳಿಸಿದ್ದಾರೆ.