ದಕ್ಷಿಣ ಕನ್ನಡದಲ್ಲಿ ಗಲಭೆಗೆ ಹುನ್ನಾರದ ಸಂದೇಶ; ಪೊಲೀಸರಿಂದ ಸಭೆ
ಮಂಗಳೂರು, ಜೂನ್ 13: ಪ್ರವಾದಿ ನಿಂದನೆ ಮಾಡಿದ ವಿಚಾರವಾಗಿ ನೂಪರ್ ಶರ್ಮಾ ಹೇಳಿಕೆಯನ್ನು ಮುಂದಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಲಭೆ ಸೃಷ್ಠಿಸಲು ನಿಗೂಢ ಪ್ಲಾನ್ ಮಾಡುತ್ತಿರುವ ಬಗ್ಗೆ ಮಾಹಿತಿ ಮಂಗಳೂರು ಪೊಲೀಸ್ ಇಲಾಖೆಗೆ ಲಭ್ಯವಾಗಿದೆ.
ನೂಪರ್ ಶರ್ಮಾ ಪ್ರವಾದಿ ನಿಂದನೆಯ ಬಳಿಕ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂಬ ಅಪಪ್ರಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಸೋಮವಾರ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದಾರೆ.
ತರಗತಿಯ ಒಳಗೆ ಸಾವರ್ಕರ್ ಫೋಟೋ: ವಿದ್ಯಾರ್ಥಿಗಳ ನಡುವೆ ಹೊಡೆದಾಟ
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಮಸೀದಿ ಕಮಿಟಿಯ ಮುಖಂಡರೊಂದಿಗೆ ಪೊಲೀಸರು ಸಭೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಮುಸ್ಲಿಂ ಮುಖಂಡರೊಂದಿಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಹಾಗೂ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿ ಸಭೆ ನಡೆಸಿ ಶಾಂತಿ ಸುವ್ಯವಸ್ಥೆ ಕಾಪಾಡುವ ಬಗ್ಗೆ ಸಭೆ ನಡೆಸಿದ್ದಾರೆ. ಸುಮಾರು 2ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಲಾಗಿದೆ.
ಪ್ರತಿಭಟನೆ ಯೋಜನೆಯಿಲ್ಲ
ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲಾ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುತ್ತೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ. ಅಲ್ಲದೆ ಪ್ರತಿಭಟನೆ ನಡೆಸುವ ಯಾವುದೇ ಚಿಂತನೆಯಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಈ ರೀತಿಯ ಜನಸಂಪರ್ಕ ಸಭೆ ಅಧಿಕವಾಗಬೇಕು. ಠಾಣೆಗೆ ಯಾವುದಾದರೂ ವಿಚಾರಕ್ಕೆ ಹೋದ ಸಂದರ್ಭದಲ್ಲಿ ತ್ವರಿತ ಸ್ಪಂದನೆ ದೊರಕಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಬೇಕೆಂದು ಮುಸ್ಲಿಂ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಪೊಲೀಸ್ ಇಲಾಖೆಯೂ ಇದಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಭಾವನೆಗಳನ್ನು ಕೆರಳಿಸುವ ಪ್ರಯತ್ನ
ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಅಪಪ್ರಚಾರದ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಎಲ್ಲಾ ಠಾಣೆ ವ್ಯಾಪ್ತಿಯ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ನಡೆಸಲಾಗಿದೆ. ಪ್ರವಾದಿಯವರಿಗೆ ನಿಂದನೆ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮೆಸೇಜ್ ವೈರಲ್ ಆಗ್ತಿತ್ತು. ಸಮಾಜದ ಶಾಂತಿ ಹಾಳು ಮಾಡಲು, ಭಾವನೆಗಳನ್ನು ಕೆರಳಿಸುವ ಪ್ರಯತ್ನ ನಡೆದಿತ್ತು. ವೈಯಕ್ತಿಕ ಹಿತಾಸಕ್ತಿ ಪೂರೈಸಲು ಮುಂದಾಗಿರುವ ಯಾರಿಗೂ ಸೊಪ್ಪು ಹಾಕಬಾರದು ಎಂದು ಹೇಳಲಾಗಿದೆ. ಯಾವುದೇ ಉಹಾಪೋಹಗಳಿಗೆ ಸ್ಪಂದಿಸಬಾರದು. ಸದ್ಯ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲು ಸಭೆ ಮಾಡಿದ್ದೇವೆ" ಎಂದರು.
ಸಾಮಾಜಿಕ ಜಾಲತಾಣದ ಮೇಲೆ ನಿಗಾ
"ಸಭೆಯಲ್ಲಿ ಭಾಗವಹಿಸಿದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲಾ ಧರ್ಮದ ಮುಖಂಡರು, ಜನಪ್ರತಿನಿಧಿಗಳ ಸಭೆ ನಡೆಸುವಂತೆ ಮನವಿ ಮಾಡಿದ್ದಾರೆ. ನಾವು ಯಾವುದೇ ಪ್ರತಿಭಟನೆಯ ಪ್ಲ್ಯಾನ್ ಮಾಡಿಲ್ಲ ಎಂದು ಹೇಳಿದ್ದಾರೆ. ಆಂತರಿಕ ವಲಯದಲ್ಲಿಯೂ ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದ ಮೆಸೇಜ್ ಬಂದಾಗ ತಿಳಿಸಬೇಕು ಎಂದು ಸೂಚಿಸಲಾಗಿದೆ. ಶಾಂತಿ ಕಾಪಾಡುವುದಕ್ಕೆ ಪೊಲೀಸ್ ಇಲಾಖೆ ಜೊತೆ ಸಹಕರಿಸುವ ಭರವಸೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೇಲೂ ನಿಗಾ ಇಟ್ಟಿದ್ದೇವೆ. ಫೇಕ್ ಐಡಿಗಳಿಂದ ಪೋಸ್ಟ್ ಹಾಕುವಂತದ್ದು ನಡೆಯುತ್ತಿದೆ. ಇದರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳಸಲಾಗುತ್ತಿದೆ
"ಸಭೆಯ ಬಳಿಕ ಮಾತನಾಡಿದ ಮುಸ್ಲಿಂ ಮುಖಂಡ ಅಬ್ದುಲ್ ಮಜೀದ್ ಸೂರಲ್ಪಾಡಿ, ಪ್ರವಾದಿ ನಿಂದನೆ ಬಗ್ಗೆ ಪ್ರತಿಭಟನೆ ಹೆಸರಲ್ಲಿ ಕಾನೂನುನ್ನು ಕೈಗೆ ತೆಗೆದುಕೊಳ್ಳಬೇಡಿ, ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ" ಎಂದು ಸಭೆಯಲ್ಲಿ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಶಾಂತಿ ಪ್ರಿಯರು. ಮಳಲಿ ವಿಚಾರದಲ್ಲಿ ತಾಳ್ಮೆ ವಹಿಸಿ ಕೋರ್ಟ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಅಧಿಕಾರ ವಹಿಸಿದ ಬಳಿಕ ಗಲಾಟೆ ಕಡಿಮೆಯಾಗಿದೆ. ದ.ಕ ಜಿಲ್ಲೆಯ ಜನ ಶಾಂತಿ ಪ್ರಿಯರು. ಆದರೆ ಇಲ್ಲಿ ಈಗ ಶಿಕ್ಷಣ ಕಡಿಮೆ ಯಾಗುತ್ತಿದೆ. ಮಕ್ಕಳಲ್ಲಿ ಧಾರ್ಮಿಕ ಭಾವನೆಗಳನ್ನು ಬಿಂಬಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಜ್ಯಾತ್ಯಾತಿತ ಮನೋಭಾವ ಕಡಿಮೆಯಾಗಿದೆ ಅಂತಾ ಹೇಳಿದ್ದಾರೆ.