ಕಾಂಗ್ರೆಸ್ ನಾಯಕರ ಟೆಂಪಲ್ ರನ್ ಕೇವಲ ನಾಟಕ, ಬೂಟಾಟಿಕೆ: ವಿಹಿಂಪ
ಮಂಗಳೂರು ಮೇ 03: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಹಿಂದೂ ದೇವಾಲಯ ಹಾಗೂ ಹಿಂದೂಗಳ ನೆನಪಾಗುತ್ತಿದೆ. ಕಾಂಗ್ರೆಸ್ ನಾಯಕರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದು ಕೇವಲ ನಾಟಕ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 5 ವರ್ಷ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿ ಕಾರ್ಯನಿರ್ವಹಿಸಿದೆ. ಹಿಂದೂ ಸಮಾಜಕ್ಕೆ ಅನೇಕ ಅಪಚಾರ ಎಸಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೋ ರಕ್ಷಣೆಯನ್ನು ನಿರ್ಲಕ್ಷಿಸಿ ,ಗೋ ಹತ್ಯೆಗೆ ಪ್ರೋತ್ಸಾಹ ನೀಡಿದ ಕಾಂಗ್ರೆಸ್ ಸರಕಾರ ಈಗ ಚುನಾವಣೆಗೆ ಎಸ್ಡಿಪಿಐ ಮತ್ತಿತರ ಮತಾಂಧ ಶಕ್ತಿಗಳೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಮಂಗಳೂರು ಜೈಲಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಎಸ್.ಡಿ.ಪಿ.ಐ ಹಾಗು ಪಿಎಫ್ಐ ಸಂಘಟನೆ ಯೊಂದಿಗೆ ಕಾಂಗ್ರೆಸ್ ಕೈ ಜೋಡಿಸಿರುವುದು ಖಂಡನೀಯ ಎಂದು ಅವರು ಹೇಳಿದರು. ಮನೆಗಳ ಹಟ್ಟಿಗಳಿಂದ ಹಾಗೂ ಗೋಶಾಲೆಗಳಿಂದ ಮಾರಕಾಸ್ತ್ರಗಳ ಮೂಲಕ ಬೆದರಿಸಿ ಗೋವುಗಳನ್ನು ಅಪಹರಿಸುವ ದುಷ್ಕರ್ಮಿಗಳಿಗೆ ರಾಜ್ಯ ಸರಕಾರ ರಕ್ಷಣೆ ನೀಡಿದೆ ಎಂದು ಗೋಪಾಲ್ ಕಿಡಿಕಾರಿದರು.
ರಾಜ್ಯದಲ್ಲಿ ಹಿಂದೂಗಳು ಆಚರಿಸುವ ಹಬ್ಬಗಳನ್ನು ತಡೆಯುವ ಹಾಗೂ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡಿದ್ದು ಮತಾಂಧ ಶಕ್ತಿಗಳೊಂದಿಗೆ ಕೈ ಜೋಡಿಸಿ ಹಿಂಸೆಗೆ ಪ್ರಚೋದನೆ ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಮತಗಳಿಗಾಗಿ ಈಗ ನಾಟಕವಾಡುತ್ತಿರುವ ಕಾಂಗ್ರೆಸನ್ನು ಜನರು ತಿರಸ್ಕರಿಸಿ ಹಿಂದೂಗಳ ಪರವಾಗಿರುವ ಪಕ್ಷಕ್ಕೆ ಮತಹಾಕುವಂತೆ ಅವರು ಆಗ್ರಹಿಸಿದರು.