ಮಾಜಿ ಸಚಿವ ಯು. ಟಿ. ಖಾದರ್ ಹಿಂಬಾಲಿಸಿದ ಅಪರಿಚಿತರು
ಮಂಗಳೂರು, ಡಿಸೆಂಬರ್ 24: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಕಾರನ್ನು ಅಪರಿಚಿತರು ಹಿಂಬಾಲಿಸಿದ್ದಾರೆ. ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
ಮಂಗಳೂರು ಕ್ಷೇತ್ರದ ಶಾಸಕ ಯು. ಟಿ. ಖಾದರ್ ಬುಧವಾರ ರಾತ್ರಿ 7.45ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದೇರಳಕಟ್ಟೆ-ನಂತೂರು ನಡುವೆ ಸುಮಾರು 10 ಕಿ. ಮೀ.ಗಳ ದೂರ ಖಾದರ್ ಕಾರನ್ನು ಬೈಕ್ನಲ್ಲಿ ಇಬ್ಬರು ಹಿಂಬಾಲಿಸಿದ್ದಾರೆ.
ಬೈಕ್ ಹಿಂಬಾಲಿಸುತ್ತಿರುವ ಬಗ್ಗೆ ಶಾಸಕರ ಎಸ್ಕಾರ್ಟ್ ಸಿಬ್ಬಂದಿಗೆ ಅನುಮಾನ ಬಂದಿದೆ. ಅವರು ವಾಹನ ನಿಲ್ಲಿಸಿ ಬೈಕ್ ತಡೆಯುವ ಪ್ರಯತ್ನ ಮಾಡಿದ್ದಾರೆ. ತಕ್ಷಣ ಬೈಕ್ ಸವಾರರು ಪರಾರಿಯಾಗಿದ್ದಾರೆ. ಎಸ್ಕಾರ್ಟ್ ವಾಹನದ ಎಎಸ್ಐ ಸುಧೀರ್ ಈ ಕುರಿತು ತಕ್ಷಣ ಕಂಟ್ರೋಲ್ ರೂಂಗೆ ಮಾಹಿತಿ ರವಾನೆ ಮಾಡಿದ್ದಾರೆ.

ಬೈಕ್ ನಂಬರ್ ಅನ್ನು ಪೊಲೀಸರು ನೋಟ್ ಮಾಡಿಕೊಂಡಿದ್ದು, ಮಾಲೀಕರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ರಾಜ್ಯದ ಸರಳ ರಾಜಕಾರಣಿಗಳಲ್ಲಿ ಯು. ಟಿ. ಖಾದರ್ ಸಹ ಒಬ್ಬರು. ಎಸ್ಕಾರ್ಟ್, ಭದ್ರತೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜನರ ಬಳಿಗೆ ಅವರು ತೆರಳುತ್ತಾರೆ. ಸಂಚಾರ ದಟ್ಟಣೆ ಉಂಟಾದಾಗ ಅದನ್ನು ಸರಿಪಡಿಸಲು ಕಾರಿನಿಂದ ಇಳಿದು ರಸ್ತೆಗೆ ಬಂದು ಬಿಡುತ್ತಾರೆ.
ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹತ್ಯೆಗೆ ಯತ್ನ ನಡೆದಿತ್ತು. ಕೆಲವು ದಿನಗಳ ಹಿಂದೆ ಮಾಜಿ ಶಾಸಕ ವರ್ತೂರು ಪ್ರಕಾಶ್ ಅಪಹರಣ ನಡೆದಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಕಾರನ್ನು ಹಿಂಬಾಲಿಸಿದವರ ಹುಡುಕಾಟದಲ್ಲಿ ತೊಡಗಿದ್ದಾರೆ.












Click it and Unblock the Notifications