ಕಾಂಗ್ರೆಸ್ ನಾಯಕನ ಕೊಂದವರು ನ್ಯಾಯಾಂಗ ಬಂಧನಕ್ಕೆ
ಸುರತ್ಕಲ್, ಮೇ.23: ಮೀನುಗಾರರ ಮುಖಂಡ ಹಿರಿಯ ಕಾಂಗ್ರೆಸಿಗ ಗಂಗಾಧರ ಪಾಂಗಾಳ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೈಕಂಪಾಡಿ ನಿವಾಸಿಗಳಾದ ಹರೀಶ್ ಬೈಕಂಪಾಡಿ (49), ಭಾಸ್ಕರ ಬೈಕಂಪಾಡಿ (50) ಹಾಗೂ ಉಡುಪಿ ಪೆರಂಪಳ್ಳಿ ರಸ್ತೆ ನಿವಾಸಿ ಪುಷ್ಪರಾಜ್ (35) ಬಂಧಿತ ಆರೋಪಿಗಳು. ಇವರು ಮೇ 14ರಂದು ತಡರಾತ್ರಿ 12.45ರ ಸುಮಾರಿಗೆ ಪಣಂಬೂರು ಮೀನಕಳಿಯ ಕೂರಿಕಟ್ಟ ಸಮೀಪ ಗಂಗಾಧರ ಪಾಂಗಳ ಸಂಚರಿಸುತ್ತಿದ್ದ ಏವಿಯೇಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಂಗಾಧರ ಪಾಂಗಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಗಾಧರ ಪಾಂಗಳ ಹಾಗೂ ಸತೀಶ್ ಬೈಕಂಪಾಡಿ ಕುಟುಂಬದೊಳಗಿನ ಹಳೆ ದ್ವೇಷ ಹಾಗೂ ರಾಜಕೀಯ ವೈಷಮ್ಯ ಈ ಕೊಲೆಗೆ ಕಾರಣ. ಪಾಂಗಳ ಅವರು ಕರ್ನಾಟಕ ರಾಜ್ಯ ಮೀನುಗಾರರ ಅಭಿವೃದ್ಧಿ ಮಂಡಳಿ ಚೇರ್ಮನ್ ಸ್ಥಾನಕ್ಕೇರುವ ಸಾಧ್ಯತೆ ಇತ್ತು. ಇದಕ್ಕೆ ಹಲವರ ವಿರೋಧವಿತ್ತು ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನಗಳು ವಶಕ್ಕೆ: ಆರೋಪಿ ಪುಷ್ಪರಾಜ್ ಚಾಲಕನಾಗಿ ಅಪಘಾತ ನಡೆಸಿದ ಬೊಲೇರೋ ವಾಹನ, ಹರೀಶ್ ಬೈಕಂಪಾಡಿಯ ರಿಟ್ಸ್ ಕಾರು ಹಾಗೂ ಭಾಸ್ಕರ ಬೈಕಂಪಾಡಿಯ ಮಾರುತಿ ಕಾರನ್ನು ಪಣಂಬೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತ ನಡೆದ ದೃಶ್ಯ, ಬೊಲೇರೋ ವಾಹನ ಕಾಯುತ್ತಾ ನಿಂತಿದ್ದು ಎಲ್ಲವೂ ರೈಲ್ವೆ ಗೂಡ್ಸ್ ಸ್ಟೇಷನ್ ಬಳಿ ಇರುವ ಸಿಸಿಟಿವಿ ಕೆಮರಾದಲ್ಲಿ ದಾಖಲಾಗಿತ್ತು. ಇದರ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು.
ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಆದೇಶದಂತೆ, ಡಿಸಿಪಿಗಳಾದ ಡಾ.ಕೆ.ವಿ.ಜಗದೀಶ್, ವಿಷ್ಣುವರ್ಧನ, ಎಸಿಪಿ ರವಿಕುಮಾರ್ ಮಾರ್ಗದರ್ಶನದಲ್ಲಿ ಪಣಂಬೂರು ಇನ್ಸ್ಪೆಕ್ಟರ್ ಎನ್.ಆರ್.ಮುಕ್ರಿ, ಎಸ್ಐ ಭಾರತಿ ನೇತೃತ್ವದಲ್ಲಿ ಸಿಬ್ಬಂದಿ ಕುಶಲ ಮಣಿಯಾಣಿ, ಪುರುಷೋತ್ತಮ, ರಘು ಎನ್, ಸತೀಶ್ ಎಂ., ಚಂದ್ರಹಾಸ ಆಳ್ವ, ಡೇವಿಡ್ ಡಿಸೋಜ, ಉದಯ ಕುಮಾರ್, ರಾಧಾಕೃಷ್ಣ, ಬಾಲಕೃಷ್ಣ, ರಶೀದ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications