ರಾಹುಲ್ ವಿರುದ್ಧ ವಾಗ್ದಾಳಿ, ಸ್ವಾಮಿ ಮೇಲೆ ದೂರು

'ರಾಹುಲ್ ಗಾಂಧಿ ಕೊಕೇನ್ ಮಾದಕ ದ್ರವ್ಯ ಸೇವಿಸುತ್ತಾನೆ, ಆತ ಡ್ರಗ್ ಅಡಿಕ್ಟ್, ನೀಚ, ಸಮಾಜ ದ್ರೋಹಿ ಎಂದು ಅವಮಾನಕಾರಿಯಾಗಿ ನಗರದ ಎ.ಬಿ.ಶೆಟ್ಟಿ ಹಾಲ್ ನಲ್ಲಿ ಮಂಗಳವಾರ ಸಂಜೆ ನಮೋ ಬ್ರಿಗೇಡ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಬ್ರಹ್ಮಣ್ಯನ್ ಸ್ವಾಮಿ ಮಾತನಾಡಿದ್ದಾರೆ ಎಂದು ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿಭಟನೆ ಜಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ಬಗ್ಗೆ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅವಹೇಳನಕಾರಿ ಪದ ಬಳಿಸಿದ್ದಾರೆ ಎಂದು ಆರೋಪಿಸಿ ಕದ್ರಿ ಸರ್ಕ್ಯೂಟ್ ಹೌಸ್ ಎದುರು ನಿನ್ನೆ ರಾತ್ರಿ 10 ಗಂಟೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮಿಥುನ್ ರೈ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ಸಮಯದಲ್ಲಿ ಸರ್ಕ್ಯೂಟ್ ಹೌಸ್ನಲ್ಲಿ ಡಾ.ಸುಬ್ರಹ್ಮಣ್ಯನ್ಸ್ವಾಮಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು. ರಾತ್ರಿ ಬಿಜೆಪಿ ಕಾರ್ಯಕರ್ತರೂ ಸರ್ಕ್ಯೂಟ್ ಹೌಸ್ ಬಳಿ ಜಮಾಯಿಸುತ್ತಿದ್ದು, ಇದನ್ನು ಕಂಡ ಪೊಲೀಸರು ಸ್ಥಳದಲ್ಲಿಯೇ ಠಿಕಾಣಿ ಹೂಡಿ ಪರಿಸ್ಥಿತಿ ನಿಯಂತ್ರಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಜೆ.ಆರ್.ಲೋಬೊ, ಪ್ರವೀಣ್ಚಂದ್ರ ಆಳ್ವಾ, ಕಾರ್ಪೊರೇಟರ್ ನವೀನ್ ಡಿಸೋಜಾ ಮತ್ತಿತರರು ಭಾಗವಹಿಸಿದ್ದರು.
ಸುಬ್ರಮಣ್ಯ ಸ್ವಾಮಿ ಹೇಳಿಕೆ ಖಂಡನೆ ಮಾಡುವ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಇನ್ನಿತರ ಹಿರಿಯ ನಾಯಕರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಆರೋಪಿಸಿ ಪ್ರತಿಭಟನೆ ಕೂಡಾ ನಡೆಸಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ ಶುರುವಾಗಿತ್ತು. ಪೊಲೀಸರ ಮಧ್ಯ ಪ್ರವೇಶದಿಂದ ಜಟಾಪಟಿ ಹತೋಟಿಗೆ ಬಂದಿತ್ತು.












Click it and Unblock the Notifications