ಮಂಗಳೂರು ಚರ್ಚ್ ದಾಳಿ ಕೇಸ್ : ಮಹೇಂದ್ರ ಕುಮಾರ್ ದೋಷಮುಕ್ತ
ಮಂಗಳೂರು, ಫೆಬ್ರವರಿ 06 : ವಿಶ್ವದಾದ್ಯಂತ ಸುದ್ದಿಯಾಗಿದ್ದ ಮಂಗಳೂರು ಚರ್ಚ್ ದಾಳಿ ಪ್ರಕರಣದಲ್ಲಿ ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ಗೆ ರಿಲೀಫ್ ಸಿಕ್ಕಿದೆ. ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿದೆ.
2008 ರಲ್ಲಿ ನಡೆದ ಮಂಗಳೂರು ಚರ್ಚ್ ದಾಳಿ ಪ್ರಕರಣದ ಕೊನೆಯ ಕೇಸ್ ನಿಂದಲೂ ಮಹೇಂದ್ರ ಕುಮಾರ್ ನಿರಾಳರಾಗಿದ್ದಾರೆ. ವಿಶ್ವದಾದ್ಯಂತ ಭಾರಿ ವಿರೋಧಕ್ಕೆ ಗುರಿಯಾಗಿದ್ದ ಈ ಪ್ರಕರಣದ ಕುರಿತು ಸುಧೀರ್ಘ ವಿಚಾರಣೆ ನಡೆಸಿದ ಮಂಗಳೂರು ನ್ಯಾಯಾಲಯ ದೋಷಯುಕ್ತ ಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಕೊರತೆಯಿಂದ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾದ ಹಿನ್ನೆಲೆಯಲ್ಲಿ ಮಹೇಂದ್ರ ಕುಮಾರ್ ಅವರನ್ನು ದೋಷಯುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಚರ್ಚ್ಗಳಿಗೆ ನುಗ್ಗಿ ಏಸುಕ್ರಿಸ್ತ ಮೂರ್ತಿಯ ಎಡಗೈ ಮುರಿದು ದಾಂದಲೆ ನಡೆಸಿದ ಪ್ರಕರಣವನ್ನು ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿ ಕೊಂಡಿದ್ದ ಅಂದಿನ ಬಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್ ಮೇಲೆ ಇದ್ದ ಕೊನೆಯ ಕೇಸ್ನ ತೀರ್ಪು ಮಂಗಳವಾರ ಪ್ರಕಟವಾಯಿತು.
ಏನಿದು ಪ್ರಕರಣ? : 2008 ರ ಸೆಪ್ಟೆಂಬರ್ 14ರಂದು 15 ಮಂದಿ ಸೇರಿಕೊಂಡು ಮಿಲಾಗ್ರಿಸ್ ಬಳಿಯ ಎಡೋರೇಶನ್ ಮೊನೆಸ್ಟ್ರಿಯಲ್ಲಿ ಧರ್ಮ ಭಗಿನಿಯರು ಪ್ರಾರ್ಥನೆ ಸಲ್ಲಿಸುತ್ತಿರುವ ಸಂದರ್ಭ ಮರದ ದೊಣ್ಣೆಯಿಂದ ಕಿಟಕಿ ಗಾಜುಗಳನ್ನು ಪುಡಿ ಮಾಡಿ ದಾಳಿ ನಡೆಸಿದ್ದರು.
ದಾಳಿ ಸಂದರ್ಭದಲ್ಲಿ ಸೇಕ್ರಮೆಂಟ್ ಮತ್ತು ಏಸು ಕ್ರಿಸ್ತರ ಮೂರ್ತಿಯ ಎಡಗೈಯನ್ನು ಮುರಿದು ಹಾಕಿದ್ದರು. ಈ ಘಟನೆ ದೇಶದಾದ್ಯಂತ ಮಾತ್ರವಲ್ಲದೇ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿತ್ತು.ಒಂದೇ ದಿನ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂಥ ಘಟನೆ ನಡೆದಿತ್ತು.
ಈ ಎಲ್ಲ ಪ್ರಕರಣಗಳ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಅಂದಿನ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ದಾಳಿಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು. ಈ ಕುರಿತು ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಜೆಎಂಎಫ್ಸಿ2ನೇ ನ್ಯಾಯಾಲಯದ ಆರೋಪ ಮುಕ್ತ ಗೊಳಿಸಿ ತೀರ್ಪು ನೀಡಿದೆ. 10 ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.