'ಮೋದಿ ಪಿಎಂ ಆದ ಮೇಲೆ ದೇಶ ಬೆಳವಣಿಗೆ ಕಾಣುತ್ತಿದೆ ಅನ್ನೋದು ತಪ್ಪು'
ಮಂಗಳೂರು, ನವೆಂಬರ್.04:'ದಿ ಐಡಿಯಾ ಆಫ್ ಭಾರತ್' ಪರಿಕಲ್ಪನೆಯೊಂದಿಗೆ ಪ್ರಾರಂಭವಾದ ಎರಡು ದಿನಗಳ ರಾಷ್ಟ್ರಮಟ್ಟದ 'ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವ'ದಲ್ಲಿ ಭಾರತೀಯತೆ ಹಾಗೂ ಭಾರತದ ಪರಿಕಲ್ಪನೆಯ ಗಂಭೀರ ಚರ್ಚೆ ನಡೆಯುತ್ತಿದೆ.
ಉತ್ಸವದ ಅಂಗವಾಗಿ ಶನಿವಾರ (ನ.04) 'ಮೋದಿನಾಮಿಕ್ಸ್-ರಿಯಾಕ್ಷನರಿ ಆರ್ ರೆವಲ್ಯೂಷನರಿ' ಎನ್ನುವ ವಿಚಾರವಾಗಿ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು.
ಸಾಹಿತ್ಯ ಉತ್ಸವದಲ್ಲಿ ಕೇಂದ್ರ ಸರಕಾರದ ಕಾರ್ಯವೈಖರಿಯ ಬಗ್ಗೆಯೂ ಬೆಳಕು ಚೆಲ್ಲಲಾಯಿತು. ಮಂಥನ ಕಾರ್ಯಕ್ರಮದಲ್ಲಿ ಚಿಂತಕ ಎಂ.ಆರ್.ವೆಂಕಟೇಶ್ ಮತ್ತು ಗೌತಮ್ ಚಿಕರ್ಮನೆ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಿಎಸ್ಟಿ ನಂತರದ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳೆಲ್ಲದರ ಬಗ್ಗೆ ವಿಸ್ತ್ರುತ ಚರ್ಚೆಗೆ ಅನುವು ಮಾಡಿಕೊಟ್ಟ ಈ ಕಾರ್ಯಕ್ರಮ ಸಭಿಕರ ಸಾಕಷ್ಟು ಅನುಮಾನಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಯಿತು.
ಐಎಎಸ್ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವುದು, ಸರ್ಕಾರಿ ಅಧಿಕಾರಿಗಳೆಲ್ಲರೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವುದು ಮತ್ತು ಸರ್ಕಾರಿ ಬಸ್ಸುಗಳಲ್ಲೇ ಪ್ರಯಾಣಿಸುವುದು ಖಡ್ಡಾಯವಾದರೆ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಅಧಿಕಾರಶಾಹಿಯನ್ನು ಹತೋಟಿಯಲ್ಲಿಡದೇ ಯಾವುದೇ ಸಮಸ್ಯೆಗಳೂ ಪರಿಹಾರ ಕಾಣಲಾರವು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಮೋದಿ ಪ್ರಧಾನಿಯಾದ ನಂತರವಷ್ಟೇ ದೇಶ ಬೆಳವಣಿಗೆ ಕಾಣುತ್ತಿದೆ ಎನ್ನುವುದು ತಪ್ಪಾಗುತ್ತದೆ. ಎಲ್ಲರ ಕಾಲದಲ್ಲಿಯೂ ಭಾರತ ಬೆಳವಣಿಗೆ ಕಾಣುತ್ತಿದೆ. ಹಿಂದಿನ ಎಲ್ಲಾ ಪ್ರಧಾನಿಗಳೂ ಹೊಣೆಗಾರಿಕೆಯ ನಡುವೆಯೂ ನಿಂದಿತರಾಗಿದ್ದಾರೆ ಎನ್ನುವ ಅಭಿಪ್ರಾಯಗಳೂ ಅಲ್ಲಿ ವ್ಯಕ್ತವಾದವು.












Click it and Unblock the Notifications