ಕ್ರಿಕೆಟ್ ಬೆಟ್ಟಿಂಗ್ ದಂಧೆ: ಸಿ.ಟಿ.ರವಿ ಪರಮಾಪ್ತ ಸೇರಿ ಆರು ಜನ ವಶಕ್ಕೆ
ಚಿಕ್ಕಮಗಳೂರು, ಫೆಬ್ರವರಿ.06 : ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ನಗರಸಭೆ ಬಿಜೆಪಿ ಸದಸ್ಯ ಸಿ.ಎಸ್.ರವಿಕುಮಾರ್ ಸೇರಿದಂತೆ 6 ಮಂದಿ ಆರೋಪಿಗಳನ್ನು ಭಾನುವಾರ ಜಿಲ್ಲಾ ಅಪರಾಧ ತನಿಖಾ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ರವಿಕುಮಾರ್ ಆಪ್ತ ಅಭಿ, ಕೋಟೆ ನಿವಾಸಿ ಪ್ರಶಾಂತ್, ಲಾರಿ ಮಾಲೀಕ ವೆಂಕಟೇಶ, ರಸಗೊಬ್ಬರ ಮಾರಾಟಗಾರ ಮೋಹನ, ಪ್ರಾರ್ಥನಾ ಮಂದಿರವೊಂದರ ಕಾರ್ಯದರ್ಶಿ ಅಫ್ಜಲ್ ಬಂಧಿತರು. ಆರೋಪಿಗಳಿಂದ 1.90 ಲಕ್ಷ ರು ನಗದು, ಚೆಕ್, ಬೆಟ್ಟಿಂಗ್ ಗೆ ಬಳಸುತ್ತಿದ್ದ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಲೆಮರೆಸಿಕೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯನೊಬ್ಬನಿಗೆ ಪೊಲೀಸರು ಬಲೆ ಬೀಸಿದ್ದಾರೆ. ಶಾಸಕ ಸಿಟಿ ರವಿ ಬಲಗೈ ಬಂಟ ನಗರಸಭಾ ಮಾಜಿ ಉಪಾಧ್ಯಕ್ಷ ಕಾಯಿ ರವಿ ಎಂಬಾತ ಈ ಜಾಲದ ಕಿಂಗ್ ಪಿನ್ ಆಗಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ಎಸ್.ಪಿ., ಕೆ. ಅಣ್ಣಾಮಲೈ, ಈ ಆರೋಪಿಗಳು ರಾಜ್ಯ ಹಾಗೂ ಹೊರ ರಾಜ್ಯದ ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದು, ಅನೇಕ ಜನಪ್ರತಿನಿಧಿಗಳು ದಂಧೆಯಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸುಧಾರಿತ ತಂತ್ರಜ್ಞಾನ ಬಳಸಿಕೊಂಡಿದ್ದಾರೆ. ಬೆಂಗಳೂರು ಹಾಟ್ಲೈನ್ ಹಾಗೂ ಸಕಲೇಶಪುರ ಹಾಟ್ಲೈನ್ ಮೂಲಕ ಬೆಟ್ಟಿಂಗ್ ನಡೆಸಿದ್ದಾರೆ.
ಈ ದಂಧೆಯ ಜಾಲ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ನಗರಗಳಿಗೆ ಹರಡಿದೆ. ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಬ್ಬರು ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ' ಎಂದು ತಿಳಿಸಿದರು.
ಬೆಟ್ಟಿಂಗ್ ದಂಧೆಯ ವಿರುದ್ಧ ಅರವಿಂದ್ ಕೂದುವಳ್ಳಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ಮೇಲೆ ಎಫ್ಐಆರ್ ದಾಖಲಾಗಿದೆ ಹಾಗೂ ತನಿಖೆ ಮುಂದುವರೆದಿದೆ.
ಒಟ್ಟಾರೆಯಾಗಿ ಸದ್ಯ ಪೋಲಿಸರು ಬೆಟ್ಟಿಂಗ್ ದಂಧೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಎಂಬುವುದಕ್ಕೆ ಈ ಪ್ರಕರಣವೇ ತಾಜಾ ಉದಾಹರಣೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೆಟ್ಟಿಂಗ್ ದಂಧೆ ಅವಿರತವಾಗಿ ನಡೆಯುತ್ತಿದೆ. ಕಳೆದ ಎರಡ್ಮೂರು ವರ್ಷಗಳಿಂದ ನಡೆಸುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಪೋಲಿಸರು ಬ್ರೇಕ್ ಹಾಕಿದ್ದಾರೆ.












Click it and Unblock the Notifications