ಕಸ ಎಸೆದವರ ಪೋಟೋ ಕ್ಲಿಕ್ಕಿಸಿ, 500 ರೂಪಾಯಿ ಗೆಲ್ಲಿ!
ಮಂಗಳೂರು, ಜುಲೈ 21: ನಗರ ಈಗಾಗಲೇ ಸ್ಮಾರ್ಟ್ ಸಿಟಿ ಎಂದು ಗುರುತಿಸಿಕೊಂಡಿದೆ. ಕೆಲ ವರ್ಷಗಳ ಹಿಂದೆ ಮಂಗಳೂರಿನ ರಾಮಕೃಷ್ಣ ಮಿಷನ್ ಪರಿಶ್ರಮದಿಂದ 'ಸ್ವಚ್ಛ ಮಂಗಳೂರು' ಪರಿಕಲ್ಪನೆಯಲ್ಲಿ ಸ್ವಚ್ಛ ನಗರಿಯಾಗಿಯೂ ಗುರುತಿಸಿಕೊಂಡಿತ್ತು. ಬರೀ ಸ್ವಚ್ಛತಾ ಕಾರ್ಯ ಮಾತ್ರವಲ್ಲದೆ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿಯೂ ರಾಮಕೃಷ್ಣ ಮಿಷನ್ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಜನರಿಂದಲೂ ಸಕಾರಾತ್ಮಕ ಸ್ಪಂದನೆ ಈ ಸಂದರ್ಭ ದೊರಕಿತ್ತು. ಈ ಸಂದರ್ಭ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಯನ್ನೂ ಮಂಗಳೂರು ನಗರಿ ತನ್ನ ಮಡಿಲಿಗೆ ಹಾಕಿಕೊಂಡಿತ್ತು.
ಇಷ್ಟೆಲ್ಲಾ ಇದ್ದರೂ ಕೆಲವೇ ಕೆಲವು ಮಂದಿಯ ಸಣ್ಣತನದಿಂದ ನಗರದ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿಯೇ ಬಂದು ಬೀಳುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತಲೂ ಮಂಗಳೂರಿಗರು ಸುಶಿಕ್ಷಿತರು ಎಂದು ಹೇಳಿಸಿಕೊಳ್ಳುತ್ತಿದ್ದಾರೆ. ಆದರೆ ಸುಶಿಕ್ಷಿತರ ನಗರದಲ್ಲಿಯೇ ರಸ್ತೆಯ ಬದಿಯಲ್ಲಿ ತ್ಯಾಜ್ಯ ರಾಶಿ ಕಂಡು ಬರುತ್ತಿರುವುದು ಖೇದಕರ. ದಿನನಿತ್ಯವೂ ತ್ಯಾಜ್ಯ ಸಂಗ್ರಹಕಾರರು ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸಿ ಡಂಪಿಂಗ್ ಯಾರ್ಡ್ ಗೆ ಹಾಕುವ ವ್ಯವಸ್ಥೆ ಇದ್ದರೂ ನಗರದ ಮಂಗಳಾದೇವಿ ಸಮೀಪದ ನಂದಿಗುಡ್ಡ ಎಂಬಲ್ಲಿ ಕಸವು ರಾಶಿರಾಶಿಯಾಗಿ ಬೀಳುತ್ತಿದೆ.
ಕಸ್ತೂರಿ ರಂಗನ್ ವರದಿ; ಮಂಗಳೂರಿನ ಈ ಹಳ್ಳಿಗಳಿಗೆ ಡೇಂಜರ್!
ಈ ಭಾಗದಲ್ಲಿ ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ ಅವರ ಪ್ರಯತ್ನದಲ್ಲಿ ಸಾಕಷ್ಟು ಮರ - ಗಿಡಗಳು ಬೆಳೆದು ಹಸಿರು ವಲಯ ಸೃಷ್ಟಿಯಾಗಿದೆ. ಅಲ್ಲದೆ ತ್ಯಾಜ್ಯದ ಬಗ್ಗೆಯೂ ಅವರು ಈ ಜನತೆಗೆ ಜಾಗೃತಿಯನ್ನು ಮೂಡಿಸಿದ್ದಾರೆ. ಅಲ್ಲದೆ ನಾಲ್ಕೈದು ಬಾರಿ ಇಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆಗೆದು ಸಂಪೂರ್ಣ ಸ್ವಚ್ಛಗೊಳಿಸಲಾಗಿತ್ತು. ಆದರೆ ಮತ್ತೆ ಅದೇ ಜಾಗದಲ್ಲಿ ದಾರಿಯುದ್ದಕ್ಕೂ ಕಸದ ರಾಶಿಯೇ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಡಂಪ್ ಆಗುವುದಕ್ಕೆ ಮುಕ್ತಿ ದೊರಕಲು ಹೊಸ ಪ್ರಯತ್ನವೊಂದನ್ನು ಜೀತ್ ಮಿಲನ್ ರೋಶ್ ಹಾಗೂ ಇಲ್ಲಿನ ಪರಿಸರಾಸಕ್ತರು ಮಾಡಿದ್ದಾರೆ.
ಮಂಗಳೂರಿನ ನಂದಿಗುಡ್ಡ ಸ್ಮಶಾನ ರಸ್ತೆಯನ್ನು ಇವರು ಸಾಕಷ್ಟು ಸಲ ಸ್ವಚ್ಚಗೊಳಿಸಿ, ತ್ಯಾಜ್ಯ ಎಸೆಯದಿರುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಇದು ಯಾವುದೇ ರೀತಿಯಲ್ಲಿ ಪ್ರಯೋಜನವಾಗಿರಲಿಲ್ಲ. ಮತ್ತೆ ಮತ್ತೆ ಇಲ್ಲಿ ತ್ಯಾಜ್ಯದ ರಾಶಿಯೇ ಬೀಳುತ್ತಿತ್ತು. ಪರಿಣಾಮ ದಾರಿಯುದ್ದಕ್ಕೂ ಗಬ್ಬುನಾತ ಬೀರುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ ಅವರ ಮುತುವರ್ಜಿಯಲ್ಲಿ ಅವರ ಪುತ್ರ, ಇಬ್ಬರು ಸಿಬ್ಬಂದಿ, ಆ್ಯಂಟಿ ಪೊಲ್ಯಷನ್ ಡ್ರೈವ್ ನ ಮೂವರು ಸಿಬ್ಬಂದಿ ಬೆಳಗ್ಗಿನಿಂದ ರಾತ್ರಿಯವರೆಗೆ ಈ ರಸ್ತೆ ಸಂಪೂರ್ಣ ಸ್ವಚ್ಚಗೊಳಿಸಿದ್ದಾರೆ. ಹಿಟಾಚಿ ಮೂಲಕ ತ್ಯಾಜ್ಯವನ್ನು ಸಂಪೂರ್ಣ ಸ್ವಚ್ಛ ಮಾಡಿ ಆ ದಾರಿಯುದ್ದಕ್ಕೂ ಮಣ್ಣು ಹಾಕಿ ಸಮತಟ್ಟು ಮಾಡಿದ್ದಾರೆ.
ಆದರೆ ಎಷ್ಟೇ ಸ್ವಚ್ಛತೆಗೊಳಿಸಿದರೂ ಮತ್ತೆ ಅಲ್ಲಿ ತ್ಯಾಜ್ಯ ಡಂಪ್ ಆಗುವ ಸಂಕಷ್ಟದಿಂದ ಪಾರಾಗಲು ಹೊಸ ಪ್ರಯತ್ನವನ್ನು ಇಲ್ಲಿನ ಪರಿಸರಾಕ್ತರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಟೊಗ್ರಾಫಿ ಅಭಿಯಾನವನ್ನು ಮಾಡಿದ್ದಾರೆ. ಈ ಅಭಿಯಾನದಲ್ಲಿ ತ್ಯಾಜ್ಯ ಡಂಪ್ ಆಗುವ ಸ್ಥಳದ ಚಂದದ ಫೋಟೋ ಕ್ಲಿಕ್ಕಿಸಿ ವಾಟ್ಸ್ಆ್ಯಪ್ ಗ್ರೂಪ್ ಗೆ ಹಾಕಿ, ಸರಿಯಾದ ಮಾಹಿತಿ ನೀಡಿದ್ದಲ್ಲಿ 500 ರೂ. ಬಹುಮಾನ ನೀಡಲಾಗುತ್ತದೆ ಎಂದು ಬ್ಯಾನರ್ ಅಳವಡಿಸಲಾಗಿದೆ. ಇವರು ಫೋಟೋಗ್ರಫಿ ಸ್ಪರ್ಧೆಯ ಬ್ಯಾನರ್ ಅಳವಡಿಸಿದ್ದಾರೆ.
ಅದಕ್ಕಾಗಿ ಜನರು ಮಾಡಬೇಕಾಗಿರೋದು ಇಷ್ಟೇ, ನಂದಿಗುಡ್ಡ ಸ್ಮಶಾನ ಹಾದಿಯಲ್ಲಿ ಕಸ ಎಸೆದವರ, ವಾಹನದ, ಕಸ ಎಸೆಯುತ್ತಿರುವ ಚಂದದ ಫೋಟೊ ಕ್ಲಿಕ್ಕಿಸಬೇಕು. ಅದರ ಸಂಪೂರ್ಣ ಮಾಹಿತಿ ನೀಡಿ ವಾಟ್ಸ್ಆ್ಯಪ್ ಗೆ ಕಳುಹಿಸಿದರೆ 500 ರೂ. ಬಹುಮಾನ ಪಕ್ಕಾ ನೀಡಲಾಗುತ್ತದೆ. ಅಲ್ಲದೆ ಈ ಪರಿಸರಾಸಕ್ತರ ತಂಡ ಈ ರಸ್ತೆಯುದ್ದಕ್ಕೂ 35 ರಷ್ಟು ಗಿಡಗಳನ್ನು ನೆಟ್ಟು ಕಸ ಎಸೆಯುದಕ್ಕೆ ಕಡಿವಾಣ ಹಾಕುವ ಯೋಚನೆಯನ್ನೂ ಮಾಡಲಾಗಿದೆಯಂತೆ. ಒಟ್ಟಿನಲ್ಲಿ ಈ ಮೂಲಕವಾದರೂ ಕಸದ ಸಂಕಷ್ಟದಿಂದ ಈ ರಸ್ತೆ ಮುಕ್ತವಾಗಬಹುದೇ ಎಂದು ಕಾದು ನೋಡಬೇಕಾಗಿದೆ.
Recommended Video