ಸಂಪುಟ ನರಸಿಂಹ ಮಠದ ವೆಬ್ ಸೈಟ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ನವೆಂಬರ್ 24:ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದ ಕೊನೆಗೊಳ್ಳುವ ಯಾವ ಸೂಚನೆಯೂ ಕಂಡು ಬರುತ್ತಿಲ್ಲ. ದಿನದಿಂದ ದಿನಕ್ಕೆ ವಿವಾದ ಜಟಿಲಗೊಳ್ಳುತ್ತಾ ಸಾಗಿದೆ.
ಈಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಮೂಲ ವಿಗ್ರಹ, ಉತ್ಸವ ಮೂರ್ತಿ, ದೇಗುಲ ಪ್ರವೇಶ ಗೋಪುರದ ಫೋಟೋಗಳನ್ನು ಬಳಸಿದ್ದಾರೆ ಎಂದು ಅರೋಪಿಸಿ ಸಂಪುಟ ನರಸಿಂಹ ಸ್ವಾಮಿ ಟ್ರಸ್ಟ್ ಹಾಗೂ ಈ ಟ್ರಸ್ಟ್ ನ ವೆಬ್ ಸೈಟ್ ನಿರ್ವಹಣೆ ಮಾಡುತ್ತಿರುವ ಏ-ಒನ್ ಲಾಜಿಕ್ಸ್ ಸಂಸ್ಥೆಯ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಐಪಿಸಿ ಸೆಕ್ಷನ್ 420, 511 ಹಾಗೂ ಐಟಿ ಆಕ್ಟ್ 66ರಂತೆ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಳದ ಕಾರ್ಯ ನಿರ್ವಹಣಾಧಿಕಾರಿ ಎಚ್ ರವೀಂದ್ರ ಅವರು ಕಾನೂನು ಬಾಹಿರವಾಗಿ ದೇವಾಲಯದ ಹೆಸರನ್ನು ಬಳಕೆ ಮಾಡುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಮೂಲಕ ಮಂಗಳೂರಿನ ಬಂದರಿನಲ್ಲಿರುವ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದ ಸೈಬರ್ ಕ್ರೈಂ ಪೊಲೀಸರು ಪ್ರಕರಣವನ್ನು ಸುಬ್ರಹ್ಮಣ್ಯ ಠಾಣೆಗೆ ವರ್ಗಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವೆಬ್ ಸೈಟ್ ನ ಮೂಲಕ ದೇವಸ್ಥಾನದಲ್ಲಿ ನಡೆಯುವ ಪೂಜೆಗಳನ್ನು ಖಾಸಗಿಯಾಗಿ ನಡೆಸಿ ದೇವಸ್ಥಾನಕ್ಕೆ ಬರುವ ಕಾಣಿಕೆ ಹಾಗೂ ದೇಣಿಗೆಯನ್ನು ಕಸಿದು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಕರಣದಲ್ಲಿ ದಾಖಲಿಸಲಾಗಿದೆ.












Click it and Unblock the Notifications