ಕಟೀಲು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಬ್ರಹ್ಮಕಲಶದ ಸಂಭ್ರಮ, ಸಡಗರ
ಮಂಗಳೂರು, ಜ 21: ಪುರಾಣಪ್ರಸಿದ್ದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ಇದೇ ಬರುವ ಬುಧವಾರದಿಂದ (ಜ 22) ಬ್ರಹ್ಮಕಲಶ ಆದಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಜನವರಿ 22ರಿಂದ ಆರಂಭವಾಗುವ ಈ ಕಾರ್ಯಕ್ರಮಗಳು ಫೆಬ್ರವರಿ 3ರಂದು ಸಂಪನ್ನಗೊಳ್ಳಲಿದೆ. ಪ್ರತೀ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನಾದ್ಯಂತ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.
ಇಲ್ಲಿ ಕೃಷ್ಣನ ಸೇವೆ, ಅಲ್ಲಿ ರಾಮನ ಸೇವೆ: ಪೇಜಾವರ ಕಿರಿಯ ಶ್ರೀಗಳು
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶಿಬರೂರು ವೇದವ್ಯಾಸ ತಂತ್ರಿಗಳ ಆಚಾರ್ಯತ್ವದಲ್ಲಿ ಮತ್ತು ಕೃಷ್ಣರಾಜ ತಂತ್ರಿಗಳ ಸಹಯೋಗದೊಂದಿಗೆ ನಡೆಯಲಿದೆ. ಧಾರ್ಮಿಕ ದತ್ತಿ ಇಲಾಖೆಯ 'ಎ' ಶ್ರೇಣಿಯಲ್ಲಿ ಬರುವ ದೇವಾಲಯಗಳಲ್ಲಿ ಕಟೀಲು ದೇವಾಲಯ ಕೂಡಾ ಒಂದು.
ಹದಿಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಮೇಲೆ ಉಪನ್ಯಾಸ ಕಾರ್ಯಕ್ರಮಗಳೂ ನಡೆಯಲಿದೆ. ವೀಣಾ ಬನ್ನಂಜೆ, ಬಿ.ವಿ.ವಸಂತ್ ಕುಮಾರ್, ಜಿ.ಎಸ್.ನಟೇಶ್, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರು ಉಪನ್ಯಾಸ ನೀಡಲಿದ್ದಾರೆ. ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ ಇಂತಿದೆ:
ಶುಕ್ರವಾರ - ಜನವರಿ 24 - ಸ್ವರ್ಣಧ್ವಜಸ್ಥಂಭ ಪ್ರತಿಷ್ಠೆ
ಗುರುವಾರ - ಜನವರಿ 30 - ಭ್ರಾಮರೀ ಅವತಾರಿಣಿಯಾದ ದುರ್ಗಾಪರಮೇಶ್ವರಿಗೆ ಬ್ರಹ್ಮಕಲಶಾಭಿಷೇಕ
ಶನಿವಾರ - ಫೆಬ್ರವರಿ 1 - ನಾಗಮಂಡಲ ಸೇವೆ
ಭಾನುವಾರ - ಫೆಬ್ರವರಿ 2 - ಕೋಟಿಜಪಯಜ್ಞ
ಸೋಮವಾರ - ಫೆಬ್ರವರಿ 3 - ಸಹಸ್ರ ಚಂಡಿಕಾಯಾಗ
ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ, ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ. ಮುಜರಾಯಿ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯದುವೀರ ಕೃಷ್ಣದತ್ತ ಒಡೆಯರ್, ಉಡುಪಿ ಕಾಣಿಯೂರು ಮಠ, ವಜ್ರದೇಹಿ ಮಠ, ಗುರುಕೃಪಾ ಸೇವಾಶ್ರಮ, ಸಾಂದೀಪನೀ ಸಾಧನಾಶ್ರಮದ ಸ್ವಾಮೀಜಿಗಳು, ಸಂಸದ ನಳಿನ್ ಕುಮಾರ್ ಕಟೀಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.