ಮಂಗಳೂರು ಆಟೋ ಸ್ಫೋಟ ಪ್ರಕರಣ: ಕೊಯಮತ್ತೂರಿನಲ್ಲಿ ಸಿಮ್ ಖರೀದಿಸಿದ್ದ ಆರೋಪಿ ಶಾರಿಕ್
ಮಂಗಳೂರು, ನವೆಂಬರ್, 21: ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿಗೆ ತಮಿಳುನಾಡಿನ ಕೊಯಮತ್ತೂರು ಲಿಂಕ್ ಇರುವುದು ಪೊಲೀಸ್ ತನಿಖೆಯ ವೇಳೆ ಬಹಿರಂಗವಾಗಿದೆ.
ಈ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಮೊಹಮ್ಮದ್ ಶಾರಿಕ್, ಕಳೆದ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಕೊಯಮತ್ತೂರಿನಲ್ಲಿ ಉಳಿದುಕೊಂಡಿದ್ದನು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
Mangaluru Blast: ಸಂಚಾರದಲ್ಲಿದ್ದ ಆಟೋದಲ್ಲಿ ಸ್ಫೋಟ ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಶನಿವಾರ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಇಬ್ಬರ ಪೈಕಿ 24 ವರ್ಷದ ಶಂಕಿತ ಆರೋಪಿ ಮೊಹಮ್ಮದ್ ಶಾರಿಕ್ ಕೂಡ ಒಬ್ಬನಾಗಿದ್ದಾನೆ.
ಕೊಯಮತ್ತೂರಿನ ವಸತಿ ನಿಲಯದಲ್ಲಿದ್ದ ಸಂದರ್ಭದಲ್ಲಿ ಆರೋಪಿ ಶಾರಿಕ್ ಸಿಮ್ ಕಾರ್ಡ್ ಅನ್ನು ಖರೀದಿಸಲು ತನ್ನ ಸಹವರ್ತಿ ಸುರೇಂದ್ರನ್ ಎಂಬಾತನ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿ ಆಗಿ ಬಳಸಿಕೊಂಡಿದ್ದನು.
ಕಳೆದ ತಿಂಗಳು ಕೊಯಮತ್ತೂರಿನಲ್ಲಿ ಕಾರು ಸ್ಫೋಟ
ಕಳೆದ ತಿಂಗಳು ಅದೇ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರ್ ಸ್ಫೋಟದಲ್ಲಿ ಜಮೀಶಾ ಮುಬಿನ್ ಎಂಬುವವರು ಮೃತಪಟ್ಟಿದ್ದರು. ಈ ಘಟನೆಗೂ ಆರೋಪಿ ಶಾರಿಕ್ ನಡುವೆ ಲಿಂಕ್ ಇದೆಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಯಾವುದೇ ಪೂರ್ವ ದಾಖಲೆಗಳಿಲ್ಲದಿದ್ದರೂ ಅನುಮಾನದ ಮೇಲೆ ತನಿಖೆ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಇಸ್ಲಾಮಿಕ್ ಸ್ಟೇಟ್ನೊಂದಿಗೆ ಆರೋಪಿಯು ಯಾವ ರೀತಿ ಸಂಪರ್ಕವನ್ನು ಹೊಂದಿದ್ದಾನೆ. ಶಂಕಿತ ಉಗ್ರರೊಂದಿಗೆ ಆರೋಪಿಯು ಸಂಪರ್ಕವನ್ನು ಹೊಂದಿದ್ದಾನೆಯೇ? ಎನ್ನುವುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗೆ ಆಧಾರ್ ಕಾರ್ಡ್ ನೀಡಿದ್ದ ಸುರೇಂದ್ರನ್ ಬಂಧನ
ಆರೋಪಿ ಮೊಹಮ್ಮದ್ ಶಾರಿಕ್ಗೆ ಸಿಮ್ ಖರೀದಿಸಲು ತನ್ನ ಆಧಾರ್ ಕಾರ್ಡ್ ಅನ್ನು ನೀಡಿದ್ದ ಉದಗಮಂಡಲಂನ ಸುರೇಂದ್ರನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಪರಿಚಯಸ್ಥ ಆಗಿದ್ದ ಸುರೇಂದ್ರನ್ ತನ್ನ ಆಧಾರ್ ಕಾರ್ಡ್ ಅನ್ನು ಶಾರಿಕ್ಗೆ ನೀಡಿದ್ದನು ಎನ್ನಲಾಗಿದೆ. ಆದರೆ, ಮಂಗಳೂರು ಸ್ಫೋಟದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರಿಗೆ ತಿಳಿಸಿರುವ ಸುರೇಂದ್ರನ್, ತನಗೆ ತಿಳಿಸದೇ ಕೊಯಮತ್ತೂರಿನಿಂದ ಶಾರಿಕ್ ಹೊರಟು ಹೋಗಿದ್ದನು ಎಂದು ಹೇಳಿದ್ದಾರೆ.
ಶಾರಿಕ್ ಸಂಪರ್ಕಗಳ ಸುತ್ತ ಪೊಲೀಸರ ತನಿಖೆ
ಕಳೆದ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರೋಪಿ ಮೊಹಮ್ಮದ್ ಶಾರಿಕ್ ಕೊಯಮತ್ತೂರಿನಲ್ಲಿ ತಂಗಿರುವುದರ ಬಗ್ಗೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಿ. ಸೈಲೇಂದ್ರ ಬಾಬು ಖಚಿತಪಡಿಸಿದ್ದಾರೆ. ಈ ಸಂಬಂಧ ವಿಶೇಷ ತಂಡಗಳನ್ನು ರಚಿಸಿದ್ದು, ಶಾರಿಕ್ ಸಹಚರರು ಮತ್ತು ಸಂಪರ್ಕಗಳ ವಿವರಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸುರೇಂದ್ರನ್ ಆಧಾರ್ ಕಾರ್ಡ್ನ್ನು ಬಳಸಿಕೊಂಡು ಶಾರಿಕ್ ಸಿಮ್ ಕಾರ್ಡ್ ಪಡೆದಿರುವುದು ನಿಜ. ನಾವು ಕರೆ ವಿವರಗಳನ್ನು ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಶಂಕಿತರು ಭೇಟಿ ನೀಡಿದ ಸ್ಥಳಗಳನ್ನು ವಿಶ್ಲೇಷಿಸುತ್ತಿದ್ದೇವೆ. ಶಾರಿಕ್ ಅನ್ನು ಮುಬಿನ್ನ ಸಾವಿನ ಪ್ರಕರಣದೊಂದಿಗೆ ಲಿಂಕ್ ಮಾಡಲು ಯಾವುದೇ ಪುರಾವೆಗಳಿಲ್ಲ, ಆದರೂ ಅವರು ಅದೇ ಹ್ಯಾಂಡ್ಲರ್ನ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ," ಎಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಿ. ಸೈಲೇಂದ್ರ ಬಾಬು ಹೇಳಿದ್ದಾರೆ.
ಕಾರ್ ಮತ್ತು ಆಟೋ ಸ್ಫೋಟದ ನಡುವಿನ ಸಾಮ್ಯತೆ
ಲಭ್ಯವಿರುವ ಮಾಹಿತಿಯ ಪ್ರಕಾರ, ಆರೋಪಿ ಮೊಹಮ್ಮದ್ ಶಾರಿಕ್ ಟೈಮರ್ ಸಾಧನಗಳಿಂದ ಪ್ರಚೋದಿಸಬಹುದಾದ ಸುಧಾರಿತ ಸ್ಫೋಟಕ ಸಾಧನಗಳ ತಯಾರಿಕೆಯಲ್ಲಿ ತರಬೇತಿ ಪಡೆದಿದ್ದನು ಎಂದು ತೋರುತ್ತಿದೆ. ಮಂಗಳೂರಿನ ಸ್ಫೋಟದ ಸ್ಥಳದಲ್ಲಿ ಸುಟ್ಟ ಪ್ರೆಶರ್ ಕುಕ್ಕರ್ ಮತ್ತು ಬ್ಯಾಟರಿಗಳು ಪತ್ತೆಯಾಗಿವೆ. ಮಂಗಳೂರು ಸ್ಫೋಟದಲ್ಲಿ ಬಳಸಲಾದ ಸ್ಫೋಟಕಗಳ ಸ್ವರೂಪ ಮತ್ತು ಅಕ್ಟೋಬರ್ 23ರಂದು ನಡೆದ ಕೊಯಮತ್ತೂರು ಕಾರ್ ಸ್ಫೋಟದಲ್ಲಿ ಪ್ರಮುಖ ಶಂಕಿತ ಮುಬಿನ್ ಸಾವನ್ನಪ್ಪಿದ ಘಟನೆಯಲ್ಲಿನ ಸಾಮ್ಯತೆಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಡಿಜಿಪಿ ಸಿ. ಸೈಲೇಂದ್ರ ಬಾಬು ಹೇಳಿದರು.
ತಮಿಳುನಾಡು ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ರಾಜ್ಯದ ಗಡಿಯಲ್ಲಿರುವ ಚೆಕ್ ಪೋಸ್ಟ್ಗಳಲ್ಲಿ ಸಿಬ್ಬಂದಿಯನ್ನು ಹೆಚ್ಚಿಸಲು ತಮಿಳುನಾಡಿನಾದ್ಯಂತ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಡಾ. ಸೈಲೇಂದ್ರ ಬಾಬು ಹೇಳಿದರು. ದುರ್ಬಲ ಸ್ಥಳಗಳಲ್ಲಿ ವಾಹನ ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಕಾರುಗಳು, ವ್ಯಾನ್ಗಳು, ಮೋಟಾರ್ಸೈಕಲ್ಗಳು ಮತ್ತು ಆಟೋರಿಕ್ಷಾಗಳಂತಹ ವಾಹನಗಳನ್ನು ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸುತ್ತಾರೆ. ರೈಲ್ವೆ ರಕ್ಷಣಾ ಪಡೆಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಸರ್ಕಾರಿ ರೈಲ್ವೆ ಪೊಲೀಸರಿಗೆ ತಿಳಿಸಲಾಗಿದೆ.