ದಕ್ಷಿಣ ಕನ್ನಡದಲ್ಲಿ ಬಿಜೆಪಿ ಗೆಲುವಿಗೆ ಪೇಜ್ ಪ್ರಮುಖ್ ತಂತ್ರಗಾರಿಕೆ?
ಮಂಗಳೂರು, ಮಾರ್ಚ್ 30 : ಚುನಾವಣೆಯಲ್ಲಿ ಈ ಬಾರಿ ಶತಾಯಗತಾಯ ಗೆಲುವಿನ ರಣತಂತ್ರಕ್ಕೆ ಮೊರೆ ಹೋಗಿರುವ ಬಿಜೆಪಿ ಪ್ರಚಾರಕ್ಕೆ ಉತ್ತರ ಪ್ರದೇಶ ಹಾಗೂ ತ್ರಿಪುರಾದಲ್ಲಿ ಕಾರ್ಯರೂಪಕ್ಕೆ ತಂದಿದ್ದ ತಂತ್ರಗಾರಿಕೆ ಅಳವಡಿಸಿ ಕೊಂಡಿದೆ. ಕರಾವಳಿದ ಭಾಗದ ಎಲ್ಲಾ ಕ್ಷೇತ್ರಗಳನ್ನು ಮರಳಿ ವಶ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಕ್ಷೇತ್ರವಾರು ಉಸ್ತುವಾರಿಗಳ ಮಾರ್ಗದರ್ಶನದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಉತ್ತರ ಪ್ರದೇಶ, ಗುಜರಾತ್ ಹಾಗೂ ತ್ರಿಪುರಾದಲ್ಲಿ ದಿಗ್ವಿಜಯ ತಂದು ಕೊಟ್ಟ ಪೇಜ್ ಪ್ರಮುಖ್ ಮಾದರಿಯನ್ನು ಈ ಬಾರಿ ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲು ಮುಂದಾಗಿದೆ. ಮತದಾರರ ಪಟ್ಟಿಯಲ್ಲಿ ಒಂದೊಂದು ಪುಟಕ್ಕೂ ಒಬ್ಬೊಬ್ಬರು ಪ್ರಮುಖರನ್ನು ನೇಮಿಸಲಾಗುತ್ತದೆ.
ಒಂದು ಪುಟದಲ್ಲಿ ಸುಮಾರು 30ರಷ್ಟು ಮತದಾರರು ಇರುತ್ತಾರೆ. ಈ ಮತದಾರರ ಪಟ್ಟಿಯಲ್ಲಿ ಸುಮಾರು 5 ರಿಂದ 8 ಮನೆಗಳು ಸಿಗುತ್ತದೆ. ಆ ಮನೆಗಳಿಗೆ ನಿರಂತರ ಭೇಟಿ ನೀಡಿ, ಮತದಾರರನ್ನು ಮಾತನಾಡಿಸಿ ಮನವೊಲಿಸುವುದು ಪೇಜ್ ಪ್ರಮುಖನ ಜವಾಬ್ದಾರಿ.

ಯಾವುದೇ ಕಾರಣಕ್ಕೂ ಒಂದು ಪುಟದಲ್ಲಿರುವ ಅಷ್ಟೂ ಮನೆಗಳ ಮತ ಬಿಜೆಪಿಗೆ ಬೀಳುವಂತೆ ನೋಡಿಕೊಳ್ಳವುದು ಪೇಜ್ ಪ್ರಮುಖ ಅವರ ಜವಾಬ್ದಾರಿ ಯಾಗಿರುತ್ತದೆ. ಈ ನಿಟ್ಟಿನಲ್ಲಿ ಜವಾಬ್ದಾರಿಗಳನ್ನು ಈಗಾಗಲೇ ಹಂಚಿಕೊಡಲಾಗಿದೆ.
ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮಹಾರಾಷ್ಟ್ರದ ಸಂಸದ ಗೋಪಾಲ್ ಶೆಟ್ಟಿ ಪೇಜ್ ಪ್ರಮುಖ ಹಾಗೂ ವಾರ್ಡ್ ಪ್ರಮುಖರ ಹಾಗೂ ಬೂತ್ ಪ್ರಮುಖರ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ.
ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸೂಚನೆಯ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಉಸ್ತುವಾರಿಯನ್ನು ನೇಮಿಸಲಾಗಿದ್ದು ಇವರು ಕೇವಲ ಪ್ರಚಾರ ಕಾರ್ಯದ ಉಸ್ತುವಾರಿ ಮಾತ್ರ ಅಲ್ಲ, ಆಯಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ಇವರದ್ದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಮೂಡುಬಿದಿರೆ ಹಾಗೂ ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಸುಳ್ಯ, ಪುತ್ತೂರು, ಬಂಟ್ವಾಳ ಹಾಗೂ ಮಂಗಳೂರು ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಲಾಗಿದೆ.












Click it and Unblock the Notifications