21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಳ್ಳಾಲಕ್ಕೆ
ಉಳ್ಳಾಲ, ಆಗಸ್ಟ್ 13: ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಸ್ಟ್ 21ರಂದು ಭೇಟಿ ನೀಡಲಿದ್ದಾರೆ.
ಅಂದು 10 ಸಾವಿರ ಜನರನ್ನು ಸೇರಿಸುವ ತೀರ್ಮಾನವನ್ನು ಕೈಗೊಂಡಿರುವ ಕ್ಷೇತ್ರ ಬಿಜೆಪಿ ಮುಖಂಡರು, ತೊಕ್ಕೋಟ್ಟುವಿನ ಆಮಂತ್ರಣ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೊಣಾಜೆಯ ಮಂಗಳ ಸಭಾಂಗಣವನ್ನು ಗುರುತಿಸಿದ್ದಾರೆ. ಆದರೆ ಭದ್ರತೆ ವಿಷಯದಿಂದ ಅದು ಅಂತಿಮವಾಗಿಲ್ಲ. [ಗುಜರಾತ್ ಮುಂದಿನ ಸಿಎಂ ಅಮಿತ್ ಶಾ ಅಲ್ವಂತೆ!, ಮತ್ತ್ಯಾರು?]

ರೈಲಿನ ಮೂಲಕ ಮಂಗಳೂರಿಗೆ ಬರಲಿರುವ ಅಮಿತ್ ಶಾ ಅವರಿಗೆ ಪಂಪ್ವೆಲ್ನಲ್ಲಿ ಅದ್ಧೂರಿ ಸ್ವಾಗತ ಕೋರಲಾಗುವುದು. ಬೆಳಗ್ಗೆ 10.30ರ ಹೊತ್ತಿಗೆ 1500 ಕಾರ್ಯಕರ್ತರ ಬೈಕ್ ಪ್ರದರ್ಶನದ ಮೂಲಕ ಉಳ್ಳಾಲದ ಅಬ್ಬಕ್ಕ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ.
ಅಲ್ಲಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ನಡೆಸಿದ ಬಳಿಕ ಕೊಣಾಜೆಯ ಬಹಿರಂಗ ಸಭೆಗೆ ಕರೆತರುವ ನಿರ್ಣಯವನ್ನು ಕೈಗೊಳ್ಳಲಾಗಿದೆ. .
ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ.
ಪರಕೀಯರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವ ನಿಟ್ಟಿನಲ್ಲಿ ರಾಷ್ಟ್ರಪ್ರೇಮಿ ಅಭಿಯಾನ ರಾಷ್ಟ್ರದಾದ್ಯಂತ ನಡೆಯಲಿದೆ. ಉಳ್ಳಾಲದಲ್ಲಿ ಪರಕೀಯರ ವಿರುದ್ಧ ಹೋರಾಡಿದ ವೀರರಾಣಿ ಅಬ್ಬಕ್ಕ ವಾಸ ಸ್ಥಳವಾಗಿರುವುದರಿಂದ ಅಭಿಯಾನಕ್ಕೆ ಉಳ್ಳಾಲ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ.












Click it and Unblock the Notifications