Mangaluru Blast Case: ವಾರದ ಬಳಿಕ ಸ್ಥಳ ಪರಿಶೀಲನೆಗೆ ಬಂದ ಉಸ್ತುವಾರಿ ಸಚಿವ
ಮಂಗಳೂರು, ನವೆಂಬರ್ 25: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸ್ಥಳಕ್ಕೆ ವಾರದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನವೆಂಬರ್ 19ರಂದು ಸಂಜೆ 4.50 ಸುಮಾರಿಗೆ ಕಂಕನಾಡಿ ಠಾಣಾ ವ್ಯಾಪ್ತಿಯ ಗರೋಡಿ ಬಳಿ ಆಟೋ ರಿಕ್ಷಾದಲ್ಲಿ ಶಂಕಿತ ಭಯೋತ್ಪಾದಕ ಶಾರೀಕ್ನಲ್ಲಿದ್ದ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಪ್ರಕರಣ ನಡೆದು ಸರಿಯಾಗಿ ಏಳು ದಿನಗಳು ಕಳೆದಿದೆ. ಘಟನಾ ಸ್ಥಳಕ್ಕೆ ಗೃಹಸಚಿವರು ಭೇಟಿ ನೀಡಿದಾಗಲೂ ಉಸ್ತುವಾರಿ ಸಚಿವರು ಬಂದಿರಲಿಲ್ಲ.
ಕುಕ್ಕರ್ ಬಾಂಬ್ ಸ್ಫೋಟ: ಎನ್ಐಎ ತನಿಖೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧಾರ
ಈ ನಡುವೆ ಸ್ಥಳ ಮಹಜರು ಕಾರ್ಯ ಪೂರ್ಣವಾಗಿದ್ದು, ಸ್ಥಳದಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಅನ್ನು ತೆಗೆಯಲಾಗಿದೆ. ಸ್ಫೋಟ ನಡೆದಿದ್ದ ಆಟೋ ರಿಕ್ಷಾವನ್ನು ಬೇರೆಡೆಗೆ ಕೊಂಡೊಯ್ಯಲಾಗಿದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿದ್ದಾರೆ.
ಪಿಎಫ್ಐ ನಿಷೇಧದ ಬಳಿಕ ಇಂತಹ ಘಟನೆಗಳಿಗೆ ಕಡಿವಾಣ
ಸ್ಥಳ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, "ಬಾಂಬ್ ಸ್ಫೋಟದ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ ಮಾಡಲಾಗಿದೆ. ಈ ಘಟನೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ಪಿಎಫ್ಐ ನಿಷೇಧದ ಬಳಿಕ ಇಂತಹ ಘಟನೆಗಳಿಗೆ ಸರ್ಕಾರ ಕಡಿವಾಣ ಹಾಕಿದೆ. ಸಂಚುಗಳನ್ನು ವಿಫಲಗೊಳಿಸುವ ಕೆಲಸ ಸರ್ಕಾರ ಮಾಡುತ್ತಿದೆ" ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ಐಎ ಘಟಕ
"ಇಂತಹ ಘಟನೆಗಳನ್ನು ತಡೆಯಲು ಎನ್ಐಎ ಘಟಕ ಇವತ್ತಲ್ಲ ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನವಾಗಲಿದೆ. ಬಾಂಬ್ ಸ್ಫೋಟದ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆಯಿಂದ ಹೊರಬರಲಿದೆ. ಸರ್ಕಾರ ಯಾರ ಮೇಲೂ ಮೃದು ಧೋರಣೆ ತಳೆದಿಲ್ಲ. ಪಿಎಫ್ಐ ನಿಷೇಧ ಇದರ ಒಂದು ಭಾಗ, ಈ ಘಟನೆಯನ್ನು ಇಡೀ ಸಮಾಜ ನಿಂತು ಎದುರಿಸಬೇಕಿದೆ," ಎಂದರು
ಹಿಂದೂ ಸಮಾಜ ಟಾರ್ಗೆಟ್ ಕೆಲಸ ವಿಫಲ
"ಕದ್ರಿ ದೇವಸ್ಥಾನ, ಕೆಲವು ಕಚೇರಿ ಹಾಗೂ ಸಾರ್ವಜನಿಕ ಜಾಗಗಳು ಅವರ ಗುರಿಯಾಗಿತ್ತು. ಹಿಂದೂ ಸಮಾಜ ಟಾರ್ಗೆಟ್ ಮಾಡುವ ಅವರ ಕೆಲಸ ವಿಫಲವಾಗಿದೆ. ಈ ಘಟನೆಯಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈವಾಡ ಇದೆ. ದೇಶದಲ್ಲಿ ಇಂತಹ ಮಾನಸಿಕತೆ ದೂರ ಆಗಬೇಕಿದೆ. ನಾವು ಈ ರೀತಿ ಆಗಲು ಬಿಡಲ್ಲ. ತನಿಖೆ ದೃಷ್ಟಿಯಿಂದ ಗೃಹ ಸಚಿವರು ಮೊದಲು ಭೇಟಿ ನೀಡಿದ್ದಾರೆ. ಎನ್ಐಎ ಘಟಕ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರ ಸಕರಾತ್ಮಕವಾಗಿ ಪರಿಶೀಲನೆ ನಡೆಸುತ್ತಿದೆ. ಇವತ್ತಲ್ಲ ನಾಳೆ ಜಿಲ್ಲೆಯಲ್ಲಿ ಎನ್ಐಎ ಘಟಕ ಸ್ಥಾಪನೆ ಆಗಲಿದೆ" ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಆಟೋ ಚಾಲಕನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ
ಮಾತು ಮುಂದುವರಿಸಿದ ಅವರು, "ದೇಶದ ಯಾವುದೇ ಭಾಗದಲ್ಲಿ ಇಂತಹ ವಾತಾವರಣ ಸೃಷ್ಟಿಯಾಗಬಾರದು. ಈ ಘಟನೆಯನ್ನು ಎಲ್ಲರೂ ಖಂಡಿಸಿ ಸಹಕಾರ ಕೊಡುವುದರ ಬಗ್ಗೆ ಎಚ್ಚರ ವಹಿಸಬೇಕು. ನೆಟ್ಟಾರು ಘಟನೆ, ಎಸ್ಡಿಪಿಐ ಉಪಟಳ ಎಲ್ಲವನ್ನೂ ಜನ ವಿರೋಧಿಸಿದ್ದಾರೆ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಆಟೋ ಚಾಲಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲಾಗುತ್ತದೆ ಎನ್ನುವ ಭರವಸೆಯನ್ನು ನೀಡಿದ್ದಾರೆ.