ರೈತರ ಸರಣಿ ಆತ್ಮಹತ್ಯೆಯನ್ನು ಕಾಂಗ್ರೆಸ್ ಪ್ರೋತ್ಸಾಹಿಸುತ್ತಿದೆ: ತಾರಾ
ಮಂಗಳೂರು, ಏಪ್ರಿಲ್ 12: "ರಾಜ್ಯ ಸರಕಾರ ಇಷ್ಟು ಸಾವಿರ ಕೋಟಿ, ಅಷ್ಟು ಸಾವಿರ ಕೋಟಿ ಎಂದು ಕೇವಲ ಕೋಟಿಗಳ ಘೋಷಣೆ ಮತ್ತು ಭಾಗ್ಯಗಳಿಗೆ ಮಾತ್ರ ಸೀಮಿತವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಹಿತ ಕಾಪಾಡುವ ದೃಷ್ಟಿಯಿಂದ ರಾಜ್ಯ ಸರಕಾರ ಸಂಪೂರ್ಣ ವಿಫಲ ವಾಗಿದೆ," ಎಂದು ವಿಧಾನ ಪರಿಷತ್ ಸದಸ್ಯೆ ನಟಿ ತಾರಾ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ವಿಧಾನಸಭಾ ವ್ಯಾಪ್ತಿಯಲ್ಲಿ ರೈತ ಮೋರ್ಚಾದಿಂದ ಹಮ್ಮಿಕೊಂಡಿರುವ ಮುಷ್ಠಿ ಅಕ್ಕಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಮಂಗಳೂರು ಹೊರವಲಯದ ಅಸೈಗೋಳಿಯ ಕೃಷಿಕ ರಾಮಕೃಷ್ಣ ಮತ್ತು ಕುರ್ನಾಡಿನ ಟಿ.ಜಿ.ರಾಜಾರಾಂ ಭಟ್ ಅವರ ಮನೆಯಲ್ಲಿ ಮುಷ್ಟಿ ಅಕ್ಕಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾರಾ ಬಿಜೆಪಿ ಸರಕಾರದ ಅವಧಿಯಲ್ಲಿ ರೈತರನ್ನು ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ರೈತಗೀತೆಗೆ ನಾಡಗೀತೆಯಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗಿತ್ತು ಎಂದು ಹೇಳಿದರು.
ಆದರೆ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 3 ಸಾವಿರ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರಣಿ ಆತ್ಮಹತ್ಯೆಯನ್ನು ಕೊನೆಗಾಣಿಸಬೇಕಿರುವುದು ರಾಜ್ಯ ಸರಕಾರದ ಕರ್ತವ್ಯವಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಕೇವಲ ಘೋಷಣೆ , ಭಾಗ್ಯಗಳಿಗಷ್ಟೇ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿನಿಮಾ ಕ್ಷೇತ್ರದಲ್ಲಿ ಉತ್ತಮ ನಟನೆ ಮಾಡಿದ್ದಕ್ಕೆ ನಗದು ಪುರಸ್ಕಾರ ನೀಡಿ ಮತ್ತಷ್ಟು ಉತ್ತಮ ಕೊಡುಗೆ ಕ್ಷೇತ್ರಕ್ಕೆ ನೀಡಲಿ ಎಂದು ಗೌರವಿಸುತ್ತಾರೆ. ಆದರೆ ಆತ್ಮಹತ್ಯೆ ಮಾಡಿದ ರೈತರಿಗೆ ಪರಿಹಾರ ಧನ ನೀಡಿ ಇನ್ನಷ್ಟು ರೈತರು ಸಾಯಲಿ ಅನ್ನುವ ದೃಷ್ಟಿಯಿಂದ ರಾಜ್ಯ ಸರಕಾರ ಪ್ರೋತ್ಸಾಹಿಸುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅವರು ಕಿಡಿಕಾರಿದರು .












Click it and Unblock the Notifications