ಬಿಎಚ್ಪಿ ಕಟ್ಟಿದವರು ಪೂಜಾರಿ ಕೆಂಗಣ್ಣಿಗೆ ಗುರಿಯಾದ್ರು!
ಮಂಗಳೂರು, ಜ. 16 : ಭಾರತೀಯ ಹಿಂದೂ ಪರಿಷತ್ (ಬಿಎಚ್ಪಿ) ಸಂಘಟನೆಯ ಸ್ಥಾಪನೆಗೆ ಹಿರಿಯ ಕಾಂಗ್ರೆಸ್ ಮುಖಂಡ, ಜನಾರ್ದನ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಚ್ಪಿ ಆರಂಭಿಸಿದ ಕಾಂಗ್ರೆಸ್ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಗುರುವಾರ ಮಾತನಾಡಿರುವ ಜನಾರ್ದನ ಪೂಜಾರಿ ಅವರು, ಪುತ್ತೂರಿನ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಎಚ್ಪಿ ಸ್ಥಾಪನೆ ಮಾಡಿರೋದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಇದೊಂದು ಸಂವಿಧಾನವಿರೋಧಿ ಸಂಘಟನೆ. ಇದರಿಂದ ಕಾಂಗ್ರೆಸ್ ಪಕ್ಷದ ಜಾತ್ಯಾತೀತ ತತ್ವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಪೂಜಾರಿ ಹೇಳಿದ್ದಾರೆ. [ಪೂಜಾರಿ, ಕಾಗೋಡು : ಮುಗಿಯದ ಮಾತಿನ ಸಮರ]

ಬಿಎಚ್ಪಿ ಸ್ಥಾಪಿಸಿದ ತಪ್ಪಿತಸ್ಥ ನಾಯಕರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಜನಾರ್ದನ ಪೂಜಾರಿ ಅವರು, ಪಕ್ಷದಲ್ಲಿರುವಾಗ ಈ ಸಂಘಟನೆ ಸ್ಥಾಪಿಸುವ ಅಗತ್ಯವಿಲ್ಲ, ಸಂಘಟನೆ ಕಟ್ಟುವವರು ಪಕ್ಷಕ್ಕೆ ರಾಜೀನಾಮೆ ನೀಡಿ ತೆರಳಲಿ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪೂಜಾರಿ ಅವರು, ಸರ್ಕಾರ ದೇಶದ ರೈತರನ್ನು ಜೀವಂತ ಸಮಾಧಿಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಭೂ ಮಸೂದೆಗೆ ತಿದ್ದುಪಡಿ ತಂದಿತ್ತು. ಆದರೆ, ಈಗ ನರೇಂದ್ರ ಮೋದಿಯವರು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತರಲು ಯತ್ನಿಸುತ್ತಿರುವುದು ರೈತರಿಗೆ ಕಂಟಕವಾಗಿದೆ ಎಂದರು.
ಅಂದಹಾಗೆ ಪುತ್ತೂರು ಕಾಂಗ್ರೆಸ್ನ ಹಲವು ನಾಯಕರು ಸೇರಿ ಬಿಜೆಪಿಯ ವಿಶ್ವ ಹಿಂದೂ ಪರಿಷತ್ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಭಾರತೀಯ ಹಿಂದೂ ಪರಿಷತ್ (ಬಿಎಚ್ಪಿ) ಸ್ಥಾಪಿಸಿದ್ದರು. ಇದು ಬುಧವಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತ್ತು. ಇದು ಕಾಂಗ್ರೆಸ್ ನಾಯಕರು ಕೆಂಗಣ್ಣಿಗೆ ಗುರಿಯಾಗಿದೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications