'ಫೆ.28ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ'
ಮಂಗಳೂರು, ಫೆಬ್ರವರಿ. 09 : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿಬ್ಬಂದಿಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಸರ್ಕಾರದ ಹಾಗೂ ಸಾರ್ವಜನಿಕರ ಗಮನ ಸೆಳೆಯಲು ಫೆಬ್ರವರಿ 28ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟದ ಅಧ್ಯಕ್ಷ ಎಲ್ಲೂರು ವೈ. ಸುದರ್ಶನ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಯುಎಫ್ ಬಿಯು ಸಂಸ್ಥೆ ದೇಶಾದ್ಯಂತ ಹತ್ತು ಲಕ್ಷ ಸದಸ್ಯ ಬಲ ಹೊಂದಿದೆ. ಸರ್ಕಾರವು ಸುಧಾರಣೆಗಳ ಹೆಸರಿನಲ್ಲಿ ಕಾರ್ಮಿಕ ಕಾಯ್ದೆಗೆ ಅನೇಕ ತಿದ್ದುಪಡಿಗಳನ್ನು ತರಲು ಉದ್ದೇಶಿಸುತ್ತಿರುವುದು ಕಾರ್ಮಿಕರಿಗೆ ಮಾರಕವಾಗಬಹುದೇ ಹೊರತು ಒಳಿತನ್ನು ಮಾಡದು.
ಕಾರ್ಮಿಕ ವಿರೋಧಿ ಧೋರಣೆಗಳನ್ನು ಸರ್ಕಾರ ಕೈಬಿಟ್ಟು ಕಾರ್ಮಿಕರ ಆಶೋತ್ತರಗಳೇನು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.
ಅದರಲ್ಲೂ ವಿಶೇಷವಾಗಿ ಕೇಂದ್ರ ಸರ್ಕಾರ ನೌಕರರಿಗೆ ಕೊಟ್ಟಂತ 20 ಲಕ್ಷ ರು ಗ್ರಾಚ್ಯುಯಿಟಿ ಕಾಯಿದೆಗೆ ತಿದ್ದುಪಡಿ ತಂದು ಪೂರ್ವಾನ್ವಯ ಆಗುವಂತೆ ಕಾರ್ಮಿಕರಿಗೆ 20 ಲಕ್ಷ ರು. ಸಿಗುವಂತೆ ಮಾಡಬೇಕು.
ಈಗಾಗಲೇ ನೋಟು ಅಮಾನ್ಯಗೊಳಿಸಿರುವ ಫಲವಾಗಿ ಬ್ಯಾಂಕಿನಲ್ಲಿ ತುರ್ತಾಗಿ ಮಾಡಬೇಕಾದ ಅನೇಕ ಕೆಲಸಗಳು ಬಾಕಿ ಉಳಿದಿವೆ. ಮುಖ್ಯವಾಗಿ ಅನುತ್ಪಾದಕ ಆಸ್ತಿ ವಸೂಲಾತಿ ತೀವ್ರಗೊಳಿಸದಿದ್ದರೆ ಅನೇಕ ಬ್ಯಾಂಕುಗಳು ನಷ್ಟ ಹೊಂದಲಿವೆ.
ಅಲ್ಲದೆ ನಮ್ಮ ಸದಸ್ಯರು ಎಷ್ಟೇ ಶ್ರಮ ವಹಿಸಿ ಗ್ರಾಹಕರ ಸೇವೆಗೆ ಆದ್ಯತೆ ಕೊಟ್ಟರೂ ನೋಟು ಅನಮ್ಯಗೊಳಿಸಿರುವ ಪರಿಣಾಮವಾಗಿ ಗ್ರಾಹಕರು ಸಂತೃಪ್ತಿ ಹೊಂದುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇದಲ್ಲದೆ ಬ್ಯಾಂಕ್ಗಳಿಗೆ ತುರ್ತಾಗಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಾತಿ ಆಗಬೇಕು ಎಂದು ಹೇಳಿದರು.