ಹಫ್ತಾ ವಸೂಲಿಗಾಗಿ ಬಜರಂಗಳದಿಂದ ಪಬ್ ಮೇಲೆ ದಾಳಿ: ಯುಟಿ ಖಾದರ್
ಮಂಗಳೂರು, ಜುಲೈ 26: ಮಂಗಳೂರು ನಗರದ ಬಲ್ಮಠದಲ್ಲಿನ ಪಬ್ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ಮಾಡಿದ್ದರು. "ಪಬ್ ದಾಳಿಯು ದಾರಿ ತಪ್ಪಿದ ಯುವಕರು ಹಫ್ತಾ ವಸೂಲಿಗಾಗಿ ಮಾಡಿರುವ ತಂತ್ರ" ಎಂದು ಬಜರಂಗದಳ ಕಾರ್ಯಕರ್ತರ ವಿರುದ್ಧ ವಿಧಾನಸಭಾ ವಿಪಕ್ಷ ಉಪನಾಯಕ ಯು. ಟಿ. ಖಾದರ್ ಗಂಭೀರ ಆರೋಪ ಮಾಡಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾನಾಡಿದ ಅವರು, "ಈ ಸಮಾಜಘಾತುಕ ಶಕ್ತಿಗಳು ವ್ಯಾಪಾರಸ್ಥರನ್ನು ಹಫ್ತಾಗಾಗಿ ಬೆದರಿಸುತ್ತದೆ. ಈ ಎಲ್ಲಾ ಘಟನೆಗಳಿಗೆ ರಾಜ್ಯ ಸರಕಾರ ಹಾಗೂ ಸಿಎಂ ಬೊಮ್ಮಾಯಿಯವರ ಆಕ್ಷನ್ಗೆ ರಿಯಾಕ್ಷನ್ ಹೇಳಿಕೆಯೇ ಪ್ರೇರಣೆ" ಎಂದು ದೂರಿದರು.
"ಸೋಮವಾರ ರಾತ್ರಿ ಪಬ್ ದಾಳಿ ಮಾಡಿರುವ ಸಂದರ್ಭದಲ್ಲಿ ಅಲ್ಲಿದ್ದ ಯುವಕರು ಇದೇ ವಾಕ್ಯವನ್ನು ಹೇಳಿದ್ದರೆಂದು ತಿಳಿದು ಬಂದಿದೆ. ಇವರ ವಿರುದ್ಧ ರಾಜ್ಯ ಸರಕಾರ ಯಾವ ಕಾರಣಕ್ಕೆ ಕ್ರಮ ಕೈಗೊಳ್ಳುವುದಿಲ್ಲ. ಪಬ್ಗೆ ಬಂದಿರುವ ಮಕ್ಕಳು ತಪ್ಪು ಮಾಡಿದ್ದಲ್ಲಿ ಅದನ್ನು ನೋಡಲು ಅವರ ಪೋಷಕರಿದ್ದಾರೆ. ಅದನ್ನು ಕೇಳಲು ಈ ಯುವಕರು ಯಾರು?" ಎಂದು ಖಾದರ್ ಪ್ರಶ್ನಿಸಿದರು.

"ಮಕ್ಕಳಿಗೆ ಜೋರು ಮಾಡಲು ಕಾನೂನಿನಲ್ಲಿ ಪೋಷಕರಿಗೇ ಅಧಿಕಾರವಿಲ್ಲ. ವಿದ್ಯಾರ್ಥಿಗಳಿಗೆ ಮಾನಸಿಕ ಹಲ್ಲೆ ಹಾಗೂ ನಿಂದನೆ ಮಾಡಲು ಇವರಿಗೆ ಅವಕಾಶ ನೀಡಿದ್ದು ಯಾರೆಂದು ಸರ್ಕಾರ ಜನರ ಮುಂದಿಡಬೇಕು. ವ್ಯಾಪಾರಿಗಳು, ಹೊಟೇಲ್ ಮಾಲಿಕರು ನೆಮ್ಮದಿಯಿಂದ ವ್ಯಾಪಾರ ಮಾಡುವಂತಾಗಬೇಕು. ಹಫ್ತಾಕ್ಕಾಗಿ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಲಿ" ಎಂದು ಯು. ಟಿ. ಖಾದರ್ ಒತ್ತಾಯಿಸಿದರು.
"ಮಂಗಳೂರಿನಲ್ಲಿ ಪಬ್ ದಾಳಿ ಮಾಡಿದ ದಾರಿ ತಪ್ಪಿದ ಯುವಕರಿಗೆ ಬೇರೆ ಅಕ್ರಮಗಳು ಕಾಣೋದಿಲ್ಲವೇ?. ಕಾಲೇಜುಗಳಿಗೆ ಬಂಕ್ ಹಾಕಿ ವಿಡಿಯೋ ಗೇಮ್ ಆಡುವ ಮಕ್ಕಳು ಕಾಣೋದಿಲ್ವಾ?. ಸರಕಾರಿ ನೌಕರರಿಗೆ ಸಂಬಳ ಬರುತ್ತಿಲ್ಲ, ಅದರ ಬಗ್ಗೆ ಪ್ರತಿಭಟನೆ ಮಾಡಲಿ. ಮಂಗಳೂರಿನಲ್ಲಿ ಅಕ್ರಮ ಮಸಾಜ್ ಪಾರ್ಲರ್ ಸಾಕಷ್ಟಿವೆ, ಅದರ ಬಗ್ಗೆ ತನಿಖೆ ಮಾಡಲಿ. ಯಾಕೆ ಅಲ್ಲಿಂದ ಹಫ್ತಾ ಬರುತ್ತಿದೆ ಅಂತಾ ಸುಮ್ಮನಿದ್ದಾರಾ?. ಸ್ಥಳೀಯ ಶಾಸಕರು ಯಾಕೆ ಮೌನವಾಗಿದ್ದಾರೆ, ಅವರ ಬೆಂಬಲ ಇದೆಯೇ? ಈ ಎಲ್ಲಾ ಘಟನೆಗಳು ಭವಿಷ್ಯದ ಮಂಗಳೂರಿಗೆ ಮಾರಕವಾಗಿದೆ. ಮಂಗಳೂರು ಕಂಪೆನಿಗಳಿಗೆ ಉದ್ಯೋಗಿಗಳು ಬರುತ್ತಿಲ್ಲ. ಇದು ಮಂಗಳೂರಿನ ಬೆಳವಣಿಗೆಗೆ ಮಾರಕ ಆಗುತ್ತದೆ. ಸರಕಾರ ಇಂತಹ ಕೃತ್ಯಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಯು. ಟಿ. ಖಾದರ್ ಆಗ್ರಹಿಸಿದರು.

ಪಬ್ ದಾಳಿ ಬಗ್ಗೆ ಬಜರಂಗದಳ ಈಗಾಗಲೇ ಪ್ರತಿಕ್ರಿಯಿಸಿದ್ದು, "ಪಬ್ಮೇಲೆ ಯಾವುದೇ ದಾಳಿ ನಡೆದಿಲ್ಲ, ಅಪ್ರಾಪ್ತರು ಪಬ್ನಲ್ಲಿ ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಒಂದು ಸಂಘಟನೆ ಯುವಕರು ಪಬ್ ಮುಂದೆ ಸೇರಿದ್ದರು. ಬಳಿಕ ಅವರನ್ನು ಪಬ್ ಹೊರಗಡೆ ಕಳುಹಿಸಲಾಗಿದೆ. ಒಂದು ಸಂಘಟನೆಗೆ ಸೇರಿದ 10-12 ಯುವಕರು ಬಲ್ಮಠದಲ್ಲಿರುವ ಪಬ್ ಗೆ ಭೇಟಿ ನೀಡಿ ಇಲ್ಲಿನ ಬೌನ್ಸರ್ ಬಳಿ ಇಲ್ಲಿ ಅಪ್ರಾಪ್ತರು ಬಂದು ಸೇರಿದ್ದಾರೆ. ಅವರಿಗೆ ಮದ್ಯವನ್ನು ಕೊಡುತ್ತಿದ್ದೀರಾ.
ಸುಮಾರು ಬಾರಿ ಈ ಬಗ್ಗೆ ನಿಮಗೆ ಮನವಿಯನ್ನು ಮಾಡಿದರೂ ಕೂಡಾ ಮತ್ತೆ ಮದ್ಯ ಕೊಡುತ್ತಿದ್ದೀರಿ. ಮ್ಯಾನೇಜರ್ಗೆ ಹೇಳಿ ಅಪ್ರಾಪ್ತರನ್ನು ಈ ಕೂಡಲೇ ಪಬ್ ನಿಂದ ಹೊರಗೆ ಕಳುಹಿಸಿ ಅಂತ ಹೇಳಿದ್ದಾರೆ. ಆ ಬಳಿಕ ಬೌನ್ಸರ್ ಪಬ್ನ ಮ್ಯಾನೇಜರ್ ಮೂಲಕ ಅಲ್ಲಿದ್ದ ಗ್ರಾಹಕರ ಐಡಿ ಕಾರ್ಡ್ ಗಳನ್ನು ಚೆಕ್ ಮಾಡಿ ಅಪ್ರಾಪ್ತರು ಯಾರಿದ್ದಾರೆ ಅವರನ್ನು ಹೊರಗೆ ಕಳುಹಿಸುವ ಕೆಲಸವನ್ನು ಮಾಡಿದ್ದಾರೆ" ಎಂದು ಹೇಳಿದೆ.












Click it and Unblock the Notifications