ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ಅದು 'ತಲೆ ದೇಹದಿಂದ ಬೇರ್ಪಡುವುದು'
ಮಂಗಳೂರು, ನ 30: ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ, ದುಷ್ಕರ್ಮಿಗಳು, ದೇಶದ್ರೋಹಿ ಬರಹವೊಂದನ್ನು ಗೋಡೆಯ ಮೇಲೆ ಬರೆದದ್ದು ಭಾರೀ ಸುದ್ದಿಯಾಗಿತ್ತು. ಈಗ ಅದೇ ರೀತಿಯ ಬರಹ ನಗರದ ಕೋರ್ಟ್ ರಸ್ತೆಯ ಗೋಡೆಯೊಂದರಲ್ಲಿ ಕಾಣಿಸಿಕೊಂಡಿದೆ.
'Gustuk e Rasool ek hi saza sar tan say juda' ಎನ್ನುವ ಗೋಡೆ ಬರಹ ಕರಾವಳಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಆ ಗೋಡೆ ಬರಹದ ಅರ್ಥ "ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ಅದು ತಲೆ ದೇಹದಿಂದ ಬೇರ್ಪಡುವುದು" ಎಂದು.
ಈ ಗೋಡೆ ಬರಹದ ಬಗ್ಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈ ಗೋಡೆ ಬರಹವನ್ನು ನಾನು ಖಂಡಿಸುತ್ತೇನೆ. ಇದನ್ನ ಯಾರಿಗೇ ಆಗಲಿ ಸಹಿಸಲು ಸಾಧ್ಯವಿಲ್ಲ. ಇದನ್ನು ಪತ್ತೆಹಚ್ಚುವುದು ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿ. ಇವರಿಗೆ ಬೆಂಬಲವಾಗಿರುವರನ್ನ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ"ಎಂದು ಖಾದರ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ಕದ್ರಿ ಠಾಣಾ ವ್ಯಾಪ್ತಿಯ ಬಿಜೈ ರಸ್ತೆಯಲ್ಲಿ 'ಲಷ್ಕರ್ ಎ ತೋಯ್ಬಾ ಮತ್ತು ತಾಲಿಬಾನ್ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬುದು ತಿಳಿದಿದೆ. ನಮ್ಮನ್ನು ವಿಧ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ, ಲಷ್ಕರ್ ಜಿಂದಾಬಾದ್' ಎನ್ನುವ ಗೋಡೆಬರಹ, ಭಾರೀ ವಿವಾದವನ್ನು ಹುಟ್ಟುಹಾಕಿತ್ತು.
ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು (ಮೊದಲ ಘಟನೆ) ಈ ಕೃತ್ಯವನ್ನು ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಂಗಳೂರು ಪೊಲೀಸರು, ದೇಶದ್ರೋಹಿಗಳ ಜಾಡು ಹಿಡಿದು ಕಾರ್ಯಾಚರಣೆ ಈಗಾಗಲೇ ಆರಂಭಿಸಿದ್ದಾರೆ.
ಈ ಘಟನೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯಾದರ್ಶಿ ಸಿ.ಟಿ.ರವಿ ವಿಷಾದ ವ್ಯಕ್ತ ಪಡಿಸಿ, "ಭಯೋತ್ಪಾದಕರನ್ನು ಸ್ಮಶಾನಕ್ಕೆ ಕಳುಹಿಸುವ ಕೆಲಸವನ್ನು ನಮ್ಮ ಸೈನಿಕರು ಮತ್ತು ಪೊಲೀಸರು ಸಮರ್ಥವಾಗಿ ನಿಭಾಯಿಸುತ್ತಾರೆ'ಎಂದು ಹೇಳಿದ್ದಾರೆ.












Click it and Unblock the Notifications