ಕರಾವಳಿ ಉತ್ಸವ ಉದ್ಘಾಟನೆಗೆ ಪ್ರಕಾಶ್ ರೈ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಮಂಗಳೂರು, ಡಿಸೆಂಬರ್ 22: ನಗರದಲ್ಲಿ ನಡೆಯಲಿರುವ ಕರಾವಳಿ ಉತ್ಸವಕ್ಕೆ ಇಂದು ಖ್ಯಾತ ಚಿತ್ರನಟ ಪ್ರಕಾಶ ರೈ ಚಾಲನೆ ನೀಡಲಿದ್ದಾರೆ. ಆದರೆ ಕರಾವಳಿ ಉತ್ಸವಕ್ಕೆ ಪ್ರಕಾಶ್ ರೈ ಚಾಲನೆ ನೀಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಕಾಶ್ ರೈ ವಿರುದ್ಧ ಮುಗಿಬಿದ್ದಿದ್ದು, 'ರೈ ಒಬ್ಬ ಕಾಂಗ್ರೆಸ್ ನ ಗಂಜಿ ಗಿರಾಕಿ' ಎಂದು ಲೇವಡಿ ಮಾಡಿದ್ದಾರೆ.

'ಕೇರಳದಲ್ಲಿ ಉಸಿರಾಡುವ ಮುಕ್ತ ವಾತಾವರಣ ಇದೆ' ಎಂದು ಹೇಳಿಕೆ ನೀಡಿದ್ದ ಪ್ರಕಾಶ್ ರೈ ವಿರುದ್ದ ಈಗ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ. ಕೇರಳದಲ್ಲಿ ಉಸಿರಾಡಲು ಉತ್ತಮಗಾಳಿ ಇರುವಾಗ ಕನ್ನಡ ನಾಡಿಗೆ ಯಾಕೆ ಬರ್ತಿಯಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗಿದೆ. ಪ್ರಕಾಶ್ ರೈ ಅವರ ಭಾವಚಿತ್ರಕ್ಕೆ ಚಪ್ಪಲಿಯ ಚಿತ್ರವನ್ನು ಎಡಿಟ್ ಮಾಡಿ 'ಗೊ ಬ್ಯಾಕ್ ಪ್ರಕಾಶ್ ರೈ' ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.
ಕಾಂಗ್ರೆಸ್ ಪಕ್ಷದ ಬಕೆಟ್ ಗಿರಾಕಿ ಎಂದು ಪ್ರಕಾಶ್ ರೈ ವಿರುದ್ಧ ಜಾಲತಾಣದಲ್ಲಿ ಬರೆಯಲಾಗಿದ್ದು, ಮುಂಬರುವ ಚುನಾವಣೆಯಲ್ಲಿ ಪ್ರಕಾಶ್ ರೈ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ವ್ಯಂಗ್ಯ ಮಾಡಲಾಗಿದೆ.
ಕರಾವಳಿ ಉತ್ಸವ ಉದ್ಘಾಟನೆಗೆ ಪ್ರಕಾಶ್ ರೈ ಅವರಿಗೆ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಲಾಗಿದೆ.












Click it and Unblock the Notifications