ಸುಳ್ಳು ಮಾಹಿತಿ ಸೃಷ್ಟಿಸಿದ ಆರೋಪ, ಮಂಗಳೂರಲ್ಲಿ ಪತ್ರಕರ್ತನ ಬಂಧನ
ಮಂಗಳೂರು, ಸೆಪ್ಟೆಂಬರ್ 8: ಪೊಲೀಸ್ ಕಾರ್ಯಾಚರಣೆಯೊಂದರ ಕುರಿತು ನಕಲಿ ವಿಡಿಯೋ ಸೃಷ್ಟಿಸಿದ ಆರೋಪದ ಮೇಲೆ ಪತ್ರಕರ್ತರೊಬ್ಬರನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಮ್ತಿಯಾಝ್ ಬಂಧಿತ ಆರೋಪಿಯಾಗಿದ್ದು ವಾರ್ತಾಭಾರತಿ ದಿನಪತ್ರಿಕೆಯ ಬಂಟ್ವಾಳ ವರದಿಗಾರರಾಗಿದ್ದಾರೆ.
ಬಂಧನ ಯಾಕೆ? ಯಾವ ವಿಡಿಯೋ?
ಆರ್ಎಸ್ಎಸ್ ಕಾರ್ಯಕರ್ತ ಶರತ್ ಕುಮಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಖಲಂದರ್ ಮನೆ ಮೇಲೆ ಇತ್ತೀಚೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮನೆಯಲ್ಲಿ ಶೋಧ ನಡೆಸುವಾಗ ಪೊಲೀಸರು ಖುರಾನ್ ಧರ್ಮಗ್ರಂಥಕ್ಕೆ ಅವಮಾನ ಮಾಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಪೊಲೀಸರು ಕಾರ್ಯಾಚರಣೆ ಮುಗಿಸಿ ಬಂದ ಬಳಿಕ ಸೃಷ್ಟಿಸಲಾಗಿದೆ. ಇದರ ಹಿಂದೆ ಪತ್ರಕರ್ತರ ಕೈವಾಡ ಇರುವುದು ಗೊತ್ತಾಗಿದೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಪತ್ರಕರ್ತನ ಬಿಡುಗಡೆಗೆ ಕುಮಾರಸ್ವಾಮಿ ಒತ್ತಾಯ
ಬಂಧಿತನಾಗಿರುವ ಪತ್ರಕರ್ತನನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
"ವಾರ್ತಾ ಭಾರತಿ ಪತ್ರಿಕೆಯ ಪತ್ರಕರ್ತನನ್ನು ಯಾಕೆ ಬಂಧಿಸಿದ್ದೀರಿ? ಬಂಧಿಸಿಯೂ ಕೋರ್ಟಿಗೆ ಯಾಕೆ ಹಾಜರುಪಡಿಸಿಲ್ಲ?" ಎಂದು ಪ್ರಶ್ನಿಸಿರುವ ಅವರು, "ಸಿದ್ದರಾಮಯ್ಯ ಸರಕಾರ ಪತ್ರಿಕಾ ಸ್ವಾತಂತ್ರ್ಯದ ಹರಣ ಮಾಡುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.