ಕಾಣಿಯೂರು ಕಾಲೇಜು ಸ್ಥಳಾಂತರಕ್ಕೆ ವಿರೋಧ
ಮಂಗಳೂರು, ಜು. 16 : ಕಾಣಿಯೂರು ಪ್ರಥಮ ದರ್ಜೆ ಕಾಲೇಜನ್ನು ಬೆಳಂದೂರಿಗೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸೌಲಭ್ಯ ಮತ್ತು ಸಿಬ್ಬಂದಿ ಕೊರತೆ ಇರುವ ಕಾಣಿಯೂರು ಪ್ರಥಮ ದರ್ಜೆ ಕಾಲೇಜನ್ನು ಬೆಳಂದೂರಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಹೇಳಿದ್ದರು. ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಕುಣಿಯೂರು ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಬೆಳಂದೂರಿಗೆ ಹೋಗಲು ಸೂಚನೆ ನೀಡಲಾಗಿತ್ತು. ಆದರೆ, ಬೆಳಂದೂರಿನಲ್ಲಿ ತರಗತಿಗಳು ಜೂ.23ರಿಂದ ಆರಂಭವಾಗಿವೆ. ಈಗ ಅಲ್ಲಿಗೆ ಸ್ಥಳಾಂತರ ಮಾಡಲು ಹೊರಟಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಚಿತ್ರಗಳಲ್ಲಿ ನೋಡಿ ಪ್ರತಿಭಟನೆ
ಎಬಿವಿಪಿ ಪ್ರತಿಭಟನೆ
ಕಾಣಿಯೂರು ಪ್ರಥಮ ದರ್ಜೆ ಕಾಲೇಜು ಬೆಳಂದೂರಿಗೆ ಸ್ಥಳಾಂತರ ಆಗುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ಮಂಗಳವಾರ ಪತ್ರಿಭಟನೆ ನಡೆಸಿದರು.
ಉತ್ತಮ ಕಟ್ಟಡವಿಲ್ಲ
ಕಾಣಿಯೂರು ಕಾಲೇಜು ಸ್ಥಳಾಂತರ ಮಾಡಲು ಹೊರಟಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ಕಾಣಿಯೂರಿನಲ್ಲಿ ಸರಿಯಾದ ಸೌಲಭ್ಯಗಳಿಲ್ಲ ಎಂದು ಕಾಲೇಜು ಸ್ಥಳಾಂತರ ಮಾಡಲಾಗುತ್ತಿದೆ. ಆದರೆ, ಬೆಳಂದೂರಿನಲ್ಲಿಯೂ ಉತ್ತಮ ಕಟ್ಟಡಗಳಿಲ್ಲ. ಆದ್ದರಿಂದ ಸ್ಥಳಾಂತರವೇಕೆ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಭೂಮಿ ಮಂಜೂರಾಗಿಲ್ಲ
ಕಾಣಿಯೂರು ಕಾಲೇಜಿಗೆ ಉತ್ತಮ ಕಟ್ಟಡವಿಲ್ಲ. ಆದರೆ, 2008-13ರವರೆಗೆ ಇಲ್ಲಿಯೇ ಕಾಲೇಜು ನಡೆಸಲಾಗಿದೆ. ಇಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಜಾಗ ಮಂಜೂರಾಗಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಸದನದಲ್ಲಿ ಪ್ರತಿಧ್ವನಿ
ಕಾಣಿಯೂರು ಕಾಲೇಜು ಸ್ಥಳಾಂತರ ವಿವಾದ ವಿಧಾನಸಭೆಯಲ್ಲಿಯೂ ಪ್ರಸ್ತಾಪವಾಗಿದೆ. ಸುಳ್ಯ ಶಾಸಕ ಎಸ್.ಅಂಗಾರ ವಿಧಾನಸಭೆಯಲ್ಲಿ ಕಾಲೇಜು ಸ್ಥಳಾಂತರ ವಿರೋಧಿಸಿ ಧರಣಿ ನಡೆಸಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ, ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅಂಗಾರ ಅವರಿಗೆ ಭರವಸೆ ನೀಡಿದ್ದಾರೆ.
ವಿವೇಕಾನಂದ ಕಾಲೇಜಿಗೆ ಸೇರ್ಪಡೆ
ಕಾಣಿಯೂರು ಕಾಲೇಜನ್ನು ಸ್ಥಳಾಂತರ ಮಾಡುವುದನ್ನು ವಿರೋಧಿಸುತ್ತಿರುವ ಪೋಷಕರು, ಕಾಣಿಯೂರು ಕಾಲೇಜಿನಿಂದ ವರ್ಗಾವಣೆ ಪತ್ರವನ್ನು ಪಡೆದುಕೊಂಡಿದ್ದಾರೆ. ಸುಮಾರು 120 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಾರೆ.