ಆಧಾರ್ ತಿದ್ದುಪಡಿಗೆ ಅಂಚೆ ಕಚೇರಿಗಳಲ್ಲಿ ವ್ಯವಸ್ಥೆ: ಮಂಗಳೂರು DC
ಮಂಗಳೂರು, ಸೆಪ್ಟೆಂಬರ್ 01 : ಆಧಾರ್ ಕಾರ್ಡ್ ಗಳಲ್ಲಿರುವ ದೋಷಗಳನ್ನು ಸರಿಪಡಿಸಲು ಅಂಚೆ ಕಚೇರಿಗಳಲ್ಲೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಂಗಳೂರು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ತಿಳಿಸಿದ್ದಾರೆ.
ಪ್ರಸ್ತುತ ಸರಕಾರದ ವಿವಿಧ ಯೋಜನೆಗಳಿಗೆ ಆಧಾರ್ ಲಿಂಕಿಂಗ್ ಸಂದರ್ಭ ಆಧಾರ್ ಕಾರ್ಡ್ ನಲ್ಲಿ ಮಾಹಿತಿ ತಾಳೆ ಹೊಂದಿರುವುದರಿಂದ ಆಧಾರ್ ತಿದ್ದುಪಡಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿಪಡಿಸಲು ಜಿಲ್ಲೆಯ 23 ಅಂಚೆ ಕಚೇರಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಪೈಕಿ ಈಗಾಗಲೇ ಮಂಗಳೂರು ವಿಭಾಗದ 15 ಅಂಚೆ ಕಚೇರಿಗಳಲ್ಲಿ ಕಾರ್ಯಾರಂಭವಾಗಿದೆ. ಅಗತ್ಯ ಪರಿಕರಗಳು ಹಾಗು ತಾಂತ್ರಿಕ ವ್ಯವಸ್ಥೆ ಒದಗಿದ ನಂತರ ಉಳಿದ ಅಂಚೆ ಕಚೇರಿಗಳಲ್ಲೂ ಆಧಾರ್ ತಿದ್ದುಪಡಿ ಪ್ರಾರಂಭವಾಗಲಿದೆ ಎಂದು ಜಗದೀಶ ಹೇಳಿದರು.
ಆಧಾರ್ ತಿದ್ದುಪಡಿ ಸಂದರ್ಭ ತ್ವರಿತವಾಗಿ ಪ್ರಕ್ರಿಯೆ ಪೂರೈಸಲು ಆಧಾರ್ ಕೇಂದ್ರಗಳಿಗೆ ಹಾಗು ತಿದ್ದುಪಡಿ ಮಾಡುವ ಅಂಚೆ ಕೇಂದ್ರಗಳಿಗೆ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸಲು ಬಿಎಸ್ಏನ್ಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದಕ್ಕೆ ಬಿಎಸ್ ಎನ್ಎಲ್ ಒಪ್ಪಿಕೊಂಡಿದೆ. ನೂತನ ಆಧಾರ್ ಕಾರ್ಡ್ ಹಾಗು ತಿದ್ದುಪಡಿಗೆ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಕಲ್ಪಿಸುತ್ತಿದ್ದು, ಸಾರ್ವಜನಿಕರು ನಿಗದಿತ ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗಳನ್ನು ಸರಿಪಡಿಸಬಹುದು ಎಂದು ಡಾ.ಕೆ.ಜಿ.ಜಗದೀಶ್ ತಿಳಿಸಿದರು.
ಆಧಾರ್ ತಿದ್ದುಪಡಿ ಅಂಚೆ ಕಚೇರಿಗಳ ವಿವರ: ಮಂಗಳೂರು ಪ್ರಧಾನ ಅಂಚೆ ಕಚೇರಿ ಪಾಂಡೇಶ್ವರ, ಹಂಪನಕಟ್ಟೆ, ಬಲ್ಮಠ, ಕಂಕನಾಡಿ, ಕೊಡಿಯಾಲ್ ಬೈಲ್, ಬಿಜೈ, ಕೊಂಚಾಡಿ, ಕುಲ ಶೇಖರ, ಅಶೋಕ್ ನಗರ, ಪಣಂಬೂರು, ಸುರತ್ಕಲ್, ಕಾಟಿಪಳ್ಳದಲ್ಲಿ ಆಧಾರ್ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.












Click it and Unblock the Notifications