ಧರ್ಮಸ್ಥಳದಲ್ಲಿ ಮೇಳೈಸಿದ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂಭ್ರಮ
ಮಂಗಳೂರು, ಫೆಬ್ರವರಿ 08:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಶುರುವಾಗಿದೆ. ಕ್ಷೇತ್ರದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾದ ವೈರಾಗ್ಯ ಮೂರ್ತಿ, ತ್ಯಾಗದ ಸಂಕೇತವಾದ ಬಾಹುಬಲಿಗೆ ಮಹಾ ಮಸ್ತಕಾಭಿಷೇಕದ ಮಜ್ಜನ ಸಂಭ್ರಮ ಆರಂಭವಾಗಿದೆ.
ಅಪಾರ ಜಿನಭಕ್ತರ, ಸಾಧುಸಂತರ, ಲಕ್ಷಾಂತರ ಭಕ್ತರ ಸಮಾಗಮ ಧರ್ಮಸ್ಥಳದಲ್ಲಿ ನಡೆಯುತ್ತಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕುಡುಮ ಕ್ಷೇತ್ರದಲ್ಲಿ ಇಂದಿನಿಂದಲೇ ಮಹಾಮಸ್ತಕಾಭಿಷೇಕದ ಸಂಭ್ರಮ ಆರಂಭವಾಗಿದೆ.
ಶ್ರೀ ಕ್ಷೇತ್ರದ ರತ್ನಗಿರಿ ಬೆಟ್ಟದಲ್ಲಿ ನಡೆಯಲಿರುವ ಬಾಹುಬಲಿ ಮಜ್ಜನ ಸಾಧು ಸಂತರು, ಜೈನ ಮುನಿಗಳ ಸಮಾಗಮಕ್ಕೆ ಸಾಕ್ಷಿಯಾಗಲಿದೆ. ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಮೇಳೈಸಿದೆ. ವೈರಾಗ್ಯದ, ತ್ಯಾಗದ, ಸಂಯಮದ, ಸಹನೆಯ ಸಾಕಾರಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂಭ್ರಮಕ್ಕೆ ಕ್ಷೇತ್ರ ಸಜ್ಜಾಗಿದೆ.
ಇಂದಿನಿಂದ ಫೆಬ್ರವರಿ 19ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ದೇಶ ಹಾಗೂ ವಿದೇಶದಿಂದ ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಮಹಾಮಸ್ತಕಾಭಿಷೇಕದ ಮೊದಲ ದಿನದ ಅಂಗವಾಗಿ ಇಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಾಧು ಸಂತರ ಸಮಾವೇಶ ನಡೆಯಿತು.
ಈ ಸಮಾವೇಶದಲ್ಲಿ ಭಾಗವಹಿಸಿರುವ ನಾಡಿನ ಶ್ರೇಷ್ಠ ಸಾಧು ಸಂತರು, ಜೈನ ಮುನಿಗಳು ನಾಡಿಗೆ ಧರ್ಮ ಸಂದೇಶ ನೀಡಿದ್ದಾರೆ.

ದೇವೇಗೌಡರನ್ನು ನೆನೆದ ವಿರೇಂದ್ರ ಹೆಗ್ಗಡೆ
ಸಂತ ಸಮ್ಮೇಳನವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉದ್ಘಾಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಗೈರು ಹಾಜರಾಗಿದ್ದರು. ದೊಡ್ಡ ಗೌಡರ ಅನುಪಸ್ಥಿತಿಯನ್ನು ನೆನಪಿಸಿಕೊಂಡ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ದೇವೇಗೌಡರು ಜೈನ ಧರ್ಮಕ್ಕೆ ಬಹಳ ಹತ್ತಿರವಾಗಿದ್ದಾರೆ. ಶ್ರವಣಬೆಳಗೊಳದ ಎಲ್ಲಾ ಕೈಕಂಕರ್ಯಗಳನ್ನು ತಾವೇ ವಹಿಸಿದ್ದರು. ಅವರ ಅನುಪಸ್ಥಿತಿ ದೊಡ್ಡ ಕೊರತೆ ಎಂದು ನೆನಪಿಸಿಕೊಂಡಿದ್ದಾರೆ.

ಹೆಗ್ಗಡೆಯವರನ್ನು ಶ್ಲಾಘಿಸಿದ ಸಾಧು ಸಂತರು
ಸಾಧು ಸಂತರ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಸಾಧು ಸಂತರು ಮಹಾಮಸ್ತಕಾಭಿಷೇಕದ ಸಂಭ್ರಮವನ್ನು ಸಂತ ನುಡಿಗಳ ಮೂಲಕ ಆರಂಭಿಸುತ್ತಿರೋದು ಹೆಗ್ಗಡೆಯವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಶ್ಲಾಘಿಸಿದರು.

ಸಂತರ ಆಶೀರ್ವಚನ ಆಲಿಸಿದರು
ಸಮ್ಮೇಳನದಲ್ಲಿ ಕಾರ್ಕಳದ ದಾನಶಾಲರ ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಹುಂಬುಂಜದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ,ಒಡಿಯೂರು ಮಹಾಸಂಸ್ಥಾನದಗಲ ಗುರುದೇವಾನಂದ ಸ್ವಾಮೀಜಿ, ಶ್ರೀ 108 ವರ್ಧಮಾನ ಸಾಗರಜೀ ಮುನಿಮಹಾರಾಜ ಸೇರಿದಂತೆ ವಿವಿಧ ಸಾಧು ಸಂತರು,ಜೈನ ಮುನಿಗಳು,ಶ್ರಾವಕ ಶ್ರಾವಿಕೆಯರು ಭಾಗವಹಿಸಿದ್ದರು. ಸಂತ ಸಮ್ಮೇಳನದಲ್ಲೂ ನೂರಾರು ಭಕ್ತರು ಭಾಗವಹಿಸಿ ಸಂತರ ಆಶೀರ್ವಚನ ಆಲಿಸಿದರು.

ಭಕ್ತರ ಚಿತ್ತ ಧರ್ಮಸ್ಥಳದತ್ತ
ನಾಳೆಯಿಂದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನರಾಗಿರುವ ಬಾಹುಬಲಿ ಸ್ವಾಮಿಗೆ ದೈವಿಕ ಕಾರ್ಯಕ್ರಮಗಳೂ ಆರಂಭವಾಗಲಿದೆ. ನಾಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಕುಟುಂಬವರ್ಗ ವಿವಿಧ ಸಚಿವರು ಗಣ್ಯರು ಭಾಗವಹಿಸಲಿದ್ದಾರೆ. ಫೆಬ್ರವರಿ 16,17,18 ರಂದು ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ಮಹಾಮಜ್ಜನ ನಡೆಯಲಿದ್ದು, ಲಕ್ಷಾಂತರ ಭಕ್ತರ ಚಿತ್ತ ಧರ್ಮಸ್ಥಳದತ್ತ ನೆಟ್ಟಿದೆ












Click it and Unblock the Notifications