ಮಂಗಳೂರು; 44 ಶ್ರೀಲಂಕಾ ಅಕ್ರಮ ನುಸುಳುಕೋರರು ಪತ್ತೆ
ಮಂಗಳೂರು, ಜೂನ್ 11; ಬೃಹತ್ ಮಾನವ ಕಳ್ಳಸಾಗಾಟ ಜಾಲವನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಅಕ್ರಮವಾಗಿ ದೇಶದೊಳಗೆ ನುಸುಳಿದ ಶ್ರೀಲಂಕಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಭಾರತದೊಳಗೆ ನುಸುಳಿದ್ದ 44 ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದೆ. ಇದರ ಹಿಂದೆ ಬೃಹತ್ ಜಾಲವಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಶ್ರೀಲಂಕಾದಿಂದ ಸಮುದ್ರ ಮಾರ್ಗವಾಗಿ ತಮಿಳುನಾಡಿಗೆ ಬಂದು, ಅಲ್ಲಿಂದ ಮಂಗಳೂರಿಗೆ ಬಂದಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಶ್ರೀಲಂಕಾದಿಂದ ಅಕ್ರಮವಾಗಿ ಬಂದು ಮಂಗಳೂರಿನಲ್ಲಿ ಕಳೆದ ಎರಡು ತಿಂಗಳಿಂದ ನೆಲೆಸಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೇ ಸಿಕ್ಕಿಹಾಕಿಕೊಂಡಿದ್ದ ಅಕ್ರಮ ನುಸುಳುಕೋರರು, ಸಮುದ್ರ ಮಾರ್ಗವಾಗಿ ಕೆನಡಾ ದೇಶಕ್ಕೆ ತೆರಳಲು ಅಣಿಯಾಗಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ಶ್ರೀಲಂಕಾದ ಅಕ್ರಮ ನುಸುಳುಕೋರರು ತಮಿಳುನಾಡಿನ ತೂತುಕುಡಿಗೆ ಬಂದು ಅಲ್ಲಿಂದ ಕೆನಡಾಗೆ ಹೋಗುವವರಿದ್ದರು. ಆದರೆ ತಮಿಳುನಾಡು ಚುನಾವಣೆ ಹಿನ್ನೆಲೆ ಅವರನ್ನ ಮಂಗಳೂರಿಗೆ ತಂದು ಬಿಡಲಾಗಿತ್ತು. ಅಲ್ಲಿ ಚುನಾವಣೆ ಹಿನ್ನೆಲೆ ತಪಾಸಣೆ ಕಾರ್ಯ ಚುರುಕಾಗಿದ್ದ ಹಿನ್ನೆಲೆ ಮಂಗಳೂರಿಗೆ ಬಂದಿದ್ದರು" ಎಂದರು.
"ಮಂಗಳೂರಿಗೆ ಬಂದು ಇಲ್ಲಿನ ಲಾಡ್ಜ್ಗಳಲ್ಲಿ 2 ತಿಂಗಳಿನಿಂದ ವಾಸ್ತವ್ಯ ಹೂಡಿದ್ದರು. ಹೀಗಾಗಿ ಸದ್ಯ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 38 ಜನರನ್ನು ವಶಕ್ಕೆ ಪಡೆದಿದ್ದು, ಉಳಿದವರ ಹುಡುಕಾಟ ಮುಂದುವರೆದಿದೆ" ಎಂದು ಮಾಹಿತಿ ನೀಡಿದರು.
"ಮಂಗಳೂರಿನಲ್ಲಿ ಇವರಿಗೆ ಆಶ್ರಯ ಕೊಡಲು ನೆರವು ನೀಡಿದವರ ಬಗ್ಗೆಯೂ ತನಿಖೆ ಆರಂಭವಾಗಿದೆ. ಬೇರೆ ದೇಶದ ವ್ಯಕ್ತಿಗಳು ಮಂಗಳೂರಿಗೆ ಆಗಮಿಸಿ ಅಕ್ರಮ ಆಶ್ರಯ ಪಡೆದಿರುವ ಬಗ್ಗೆ ತನಿಖೆ ಮುಂದುವರೆದಿದೆ. ಇವರಿಗೆ ಆಶ್ರಯ ಕೊಟ್ಟ ಕಾರಣ ಮತ್ತು ನೆರವು ನೀಡಿದ ಕಾರಣ ಇಲ್ಲಿನ 6 ಜನರನ್ನು ವಶಕ್ಕೆ ಪಡೆಯಲಾಗಿದೆ" ಎಂದು ತಿಳಿಸಿದರು.
"ಬಂಧಿತರಾವರಲ್ಲಿ ಕೆಲವರು ಇಂಗ್ಲೀಷ್ ಮಾತನಾಡುತ್ತಿದ್ದಾರೆ. ಬಹುತೇಕರು ತಮಿಳು ಮಾತನಾಡುತ್ತಾರೆ. ಶ್ರೀಲಂಕಾದಿಂದ ಮಾರ್ಚ್ 17ಕ್ಕೆ ಹೊರಟು ತಮಿಳುನಾಡಿಗೆ ಬಂದಿದ್ದಾರೆ. ಬಹುತೇಕ ಮಂದಿ ಶ್ರೀಲಂಕಾದ ಉತ್ತರ ಭಾಗದವರು. ಮಂಗಳೂರಿನ ಎರಡು ಲಾಡ್ಜ್ ಮತ್ತು ಎರಡು ಮನೆಗಳಲ್ಲಿ ವಾಸ್ತವ್ಯ ಹೂಡಿದ್ದರು" ಎಂದರು.
"ತಮಿಳುನಾಡು ಗುಪ್ತಚರ ಇಲಾಖೆ ಪ್ರಕಾರ ಇವರು ಕೆಲಸಕ್ಕಾಗಿ ಮಾತ್ರ ಕೆನಡಾಗೆ ಹೋಗುವವರಿದ್ದರು. ಇವರಿಗೆ ಶ್ರೀಲಂಕಾ ಮತ್ತು ತಮಿಳುನಾಡಿನಲ್ಲಿ ಏಜೆಂಟ್ ಇದ್ದಾರೆ. ಮಂಗಳೂರಿನಲ್ಲೂ ಇವರಿಗೆ ಏಜೆಂಟ್ಗಳಿರುವ ಸಾಧ್ಯತೆ ಇದೆ. ತನಿಖೆ ನಡೆಯುತ್ತಿದೆ" ಎಂದು ಆಯುಕ್ತರು ವಿವರಿಸಿದರು.