ದಕ್ಷಿಣ ಕನ್ನಡ; ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರ ಸಾವು
ಮಂಗಳೂರು, ಡಿಸೆಂಬರ್ 8 : ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ. ಬಂಟ್ವಾಳ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ವಿಟ್ಲ ಹೋಬಳಿ ಕರೋಪಾಡಿ ಗ್ರಾಮದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನಲ್ಲಿ ದೇವಸ್ಥಾನದ ಕಾಮಗಾರಿ ನಡೆಯುತ್ತಿತ್ತು. ಶನಿವಾರ ಇಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಸುಮಾರು 80 ಅಡಿ ಎತ್ತರದಿಂದ ಮಣ್ಣು ಕುಸಿದು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಬಾಳಪ್ಪ ನಾಯ್ಕ(56), ರಮೇಶ (50), ಪ್ರಕಾಶ ಎಂದು ಗುರುತಿಸಲಾಗಿದ್ದು, ಎಲ್ಲರೂ ಸ್ಥಳೀಯರಾಗಿದ್ದಾರೆ. ಘಟನೆಯಲ್ಲಿ ಪ್ರಭಾಕರ ಎಂಬುವವರು ಗಾಯಗೊಂಡಿದ್ದು, ಹೆಚ್ವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಿಲ್ಲರ್ ಹಾಕಲು ಜೆಸಿಬಿಯಿಂದ ಗುಂಡಿ ತೆಗೆಯಲಾಗಿತ್ತು. ಮೂವರು ಗುಂಡಿಯೊಳಗೆ ಇಳಿದು ಅದನ್ನು ಸಮತಟ್ಟು ಮಾಡುತ್ತಿದ್ದರು. ಆಗ ಮೇಲಿನಿಂದ ಬೃಹತ್ ಗಾತ್ರದ ಮಣ್ಣಿನ ದಿಬ್ಬ ಕುಸಿದಿದೆ. ಇದರಿಂದಾಗಿ ಎಲ್ಲರೂ ಮಣ್ಣಿನಡಿ ಸಿಲುಕಿದರು.
ಮೃತ ದೇಹಗಳನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್. ಆರ್. ರಶ್ಮಿ, ವಿಟ್ಲ ಕಂದಾಯ ನಿರೀಕ್ಷಕರು, ಬಂಟ್ವಾಳ ಪೋಲಿಸ್ ವೃತ್ತ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications