ವೈದ್ಯಕೀಯ ಸೀಟು ಕೊಡಿಸುವುದಾಗಿ ಕೋಟ್ಯಂತರ ರುಪಾಯಿ ವಂಚನೆ
ಮಂಗಳೂರು, ಸೆಪ್ಟೆಂಬರ್ 19: ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೋಟ್ಯಂತರ ರುಪಾಯಿ ವಂಚಿಸಿರುವ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್, '16 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ, 2.78 ಕೋಟಿ ರು. ಪಡೆದು, ವಂಚಿಸಿರುವ ಈರೋಡ್ ನ ಆರ್. ಸಂಜೀವಕುಮಾರ್(45) ಮತ್ತು ಮಡಿಕೇರಿ ಸಮೀಪದ ಬಿಳಿಗೆರೆ ಗ್ರಾಮದ ತಿಮ್ಮಯ್ಯ (34) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 37.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ' ಎಂದರು.[ನೂರು ರುಪಾಯಿ, ಒಂದು ಪ್ಲೇಟ್ ಬಿರಿಯಾನಿಗೆ 42 ಬಸ್ ಗೆ ಬೆಂಕಿ]

2015-16ನೇ ಶೈಕ್ಷಣಿಕ ವರ್ಷದಲ್ಲಿ ಕೆಲವರು ಇದೇ ರೀತಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಂಚಿಸಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ದೇರಳಕಟ್ಟೆಯಲ್ಲಿರುವ ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಈ ಆರೋಪಿಗಳು ವಂಚಿಸಿದ್ದರು. 7 ವಿದ್ಯಾರ್ಥಿಗಳು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಮುಂದುವರೆಸಿದಾಗ 16 ವಿದ್ಯಾರ್ಥಿಗಳಿಂದ ಆರೋಪಿಗಳು ಹಣ ಪಡೆದು ವಂಚಿಸಿರುವುದು ಪತ್ತೆಯಾಯಿತು ಎಂದು ತಿಳಿಸಿದರು.
ಸಂಜೀವಕುಮಾರ್ ತಮಿಳುನಾಡಿನಲ್ಲಿ ಕಚೇರಿಯೊಂದನ್ನು ಹೊಂದಿದ್ದು, ಶೈಕ್ಷಣಿಕ ಸಲಹೆಗಾರ ಎಂದು ಬಿಂಬಿಸಿಕೊಂಡಿದ್ದ. ತಿಮ್ಮಯ್ಯ ನಗರದ ಖಾಸಗಿ ವೈದ್ಯಕೀಯ ಕಾಲೇಜೊಂದರಲ್ಲಿ ಉದ್ಯೋಗದಲ್ಲಿದ್ದ. ಕೆಲವು ವರ್ಷಗಳ ಹಿಂದೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಬಳಿಕ ಸಂಜೀವಕುಮಾರ್ ಜತೆ ಸೇರಿಕೊಂಡು ವೈದ್ಯಕೀಯ ಸೀಟು ಕೊಡಿಸುವ ನೆಪದಲ್ಲಿ ವಂಚಿಸುವುದನ್ನು ಆರಂಭಿಸಿದ್ದ ಎಂಬುದು ತನಿಖೆಯ ವೇಳೆ ಗೊತ್ತಾಗಿದೆ.[ಇನ್ಫಿ ಟೆಕ್ಕಿ ಸ್ವಾತಿ ಕೊಂದ ರಾಮ ಆತ್ಮಹತ್ಯೆಗೆ ಶರಣು]
ಆರೋಪಿಗಳು ಒಬ್ಬ ವಿದ್ಯಾರ್ಥಿಯಿಂದ 20 ಲಕ್ಷದಿಂದ 25 ಲಕ್ಷದವರೆಗೆ ಹಣ ಪಡೆದು ವಂಚಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ವಂಚನೆಗೆ ಒಳಗಾದ ಎಲ್ಲರೂ ತಮಿಳುನಾಡಿನ ವಿದ್ಯಾರ್ಥಿಗಳು. ಹಣ ಕಳೆದುಕೊಂಡವರು ಕಾಲೇಜುಗಳನ್ನು ಸಂಪರ್ಕಿಸಿದ ಬಳಿಕ ವಂಚನೆಗೆ ಒಳಗಾಗಿರುವುದು ಗೊತ್ತಾಗಿತ್ತು.
ಇನ್ನೂ ಹೆಚ್ಚು ಜನರಿಗೆ ವಂಚಿಸಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ಮುಂದುವರೆಸಲಾಗುವುದು. ವಂಚನೆಗೆ ಒಳಗಾದ ಎಲ್ಲ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕೆಲಸವನ್ನು ಉಳ್ಳಾಲ ಠಾಣೆ ಇನ್ ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದ ತನಿಖಾ ತಂಡ ಮಾಡುತ್ತಿದೆ ಎಂದು ಕಮಿಷನರ್ ವಿವರಿಸಿದರು.












Click it and Unblock the Notifications