ಈ ಊರಲ್ಲಿ 108 ಸಂಖ್ಯೆಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಇಲ್ಲ ಅಂತಾರೆ!!
ಮಂಗಳೂರು: ಅಪಘಾತದ ವೇಳೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲೆಂದು ಸರ್ಕಾರ 108 ಆ್ಯಂಬುಲೆನ್ಸ್ ಸೇವೆಯನ್ನು ಜನತೆಗೆ ಒದಗಿಸಿದೆ. ಈ ವ್ಯವಸ್ಥೆ ರಾಜ್ಯದೆಲ್ಲೆಡೆ ಹಗಲಿರುಳೂ ಸೇವೆಯಲ್ಲಿದ್ದರೂ ಕೆಲವೆಡೆ ಮಾತ್ರ ಇದರ ಅವ್ಯವಸ್ಥೆ ಹೇಳತೀರದು .
ಮಂಗಳೂರಿನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬ ಅಪಘಾತಕ್ಕೆ ಸಿಲುಕಿದಾಗ ಜನರು 108 ಸಂಖ್ಯೆಗೆ ಕರೆ ಮಾಡಿದಾಗ ಅತ್ತ ಕಡೆಯಿಂದ ಬಂದ ಉತ್ತರ ''ಘಟನಾ ಸ್ಥಳಕ್ಕೆ ಕಳುಹಿಸಲು ಯಾವುದೇ ಆ್ಯಂಬುಲೆನ್ಸ್ ಇಲ್ಲ'' ಎಂದು!
ಬಾವುಟಗುಡ್ಡೆಯಲ್ಲಿ ನಿನ್ನೆ ವ್ಯಕ್ತಿಯೊಬ್ಬರು ಬಸ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಆದರೆ ಬಸ್ ಸಿಬ್ಬಂದಿ ಬಸ್ ನಿಲ್ಲಿಸದೇ ಪರಾರಿಯಾದ ಹಿನ್ನಲೆಯಲ್ಲಿ ನಡು ರಸ್ತೆಯಲ್ಲೇ ಬಿದ್ದಿದ್ದ ವ್ಯಕ್ತಿಯ ನೆರವಿಗೆ ಸ್ಥಳೀಯರು ಬಂದಿದ್ದರು.

ಈ ವೇಳೆ ಎಸಿಪಿ ತಿಲಕ್ ಚಂದ್ರ ಸೇರಿದಂತೆ ಸ್ಥಳೀಯರು ಸ್ಥಳಕ್ಕೆ ಬಂದು ಗಾಯಗೊಂಡ ವ್ಯಕ್ತಿಯನ್ನು ರಸ್ತೆಯಿಂದ ಮೇಲಕ್ಕೆತ್ತಿ ಬದಿಗೆ ತಂದು ಉಪಚರಿಸಿದರು. ಇದೇ ವೇಳೆ ಸ್ಥಳಕ್ಕೆ ಬಂದ ಬಂದರು ಠಾಣೆಯ ಸಿಬ್ಬಂದಿಯೊಬ್ಬರು 108 ಆಂಬ್ಯೂಲೆನ್ಸ್ ಗೆ ಕರೆ ಮಾಡಿದ್ದರು. ಆದರೆ ಈ ವೇಳೆ ಆ್ಯಂಬುಲೆನ್ಸ್ ಸಿಬ್ಬಂದಿ ವರ್ತಿಸಿದ ರೀತಿ ಮಾತ್ರ ಎಲ್ಲರಿಗೂ ಆಘಾತ ತಂದಿತ್ತು.
'ಸದ್ಯ ನಮ್ಮಲ್ಲಿರುವ ಆಂಬ್ಯೂಲೆನ್ಸ್ ರಿಪೇರಿಗೆ ಹೋಗಿರುವ ಹಿನ್ನಲೆಯಲ್ಲಿ ವಾಹನ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಅಲ್ಲದೇ ದೂರದ ಕಿನ್ನಿಗೋಳಿ, ಫರಂಗಿಪೇಟೆ ಹಾಗೂ ಬಜ್ಪೇಯಲ್ಲಿರುವ 108 ಆಂಬ್ಯೂಲೆನ್ಸ್ ಬಾವುಟಗುಡ್ಡೆಗೆ ಬರುವುದು ತಡವಾಗಬಹುದು. ಹೀಗಾಗಿ ನೀವೇ ಬೇರೆ ವಾಹನ ವ್ಯವಸ್ಥೆ ಮಾಡಿ , ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ' ಎಂಬ ಅಲ್ಲಿನ ಸಿಬ್ಬಂದಿ ಪುಕ್ಕಟ್ಟೆ ಸಲಹೆ ನೀಡಿದರು ಎನ್ನಲಾಗಿದೆ.
ಇದರಿಂದ ಬೇರೆ ವಿಧಿಯಿಲ್ಲದೆ ಗಾಯಾಳುವನ್ನು ಸ್ಥಳೀಯರೇ ರಿಕ್ಷಾ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದ್ದು, ಸದ್ಯ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಂಗ್ಳೂರು ನಗರದಲ್ಲೇ ಈ ರೀತಿಯ ದುಸ್ಥಿತಿಯ ಪರಿಸ್ಥಿತಿ ಇದ್ದರೆ ಹಳ್ಳಿಗಳಲ್ಲಿ ಯಾವ ರೀತಿ ಸಮಸ್ಯೆ ಇರಬಹುದು ಎಂಬ ಮಾತು ಇದೇ ವೇಳೆ ಸಹಜವಾಗಿಯೇ ಉದ್ಭವಿಸುತ್ತದೆ
ಮಂಗಳೂರು ನಗರಕ್ಕೆ ಒಂದೇ ವಾಹನ!
ಮಂಗಳೂರು ನಗರದಲ್ಲಿ ಕೇವಲ ಒಂದು 108 ಆಂಬ್ಯೂಲೆನ್ಸ್ ಇರುವುದು ಮಾತ್ರ ಸೋಜಿಗದ ಸಂಗತಿಯೇ ಸರಿ. ಅಲ್ಲದೆ ದುಸ್ಥಿತಿಯಲ್ಲಿರುವ ಆಂಬ್ಯೂಲೆನ್ಸ್ ಒಂದು ವಾರವಾದರೂ ಇನ್ನೂ ರಿಪೇರಿಯಾಗದೆ ಇರುವುದಕ್ಕೆ ಸಂಬಂಧಿತ ಇಲಾಖೆಗಳ ಬೇಜವಾಬ್ದಾರಿಯೇ ಕಾರಣ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ.
ಅಲ್ಲದೆ ದುರಸ್ಥಿತಿಯ ಹಿನ್ನಲೆಯಲ್ಲಿಯೂ ಮತ್ತೊಂದು ಆಂಬ್ಯೂಲೆನ್ಸ್ ನ್ನು ಪರ್ಯಾಯವಾಗಿ ಇರಿಸಬೇಕಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.












Click it and Unblock the Notifications