ಸಂಕಷ್ಟಕ್ಕೆ ಸ್ಪಂದಿಸಿದ ಜನ, ದೀಪಕ್ ತಾಯಿ ಖಾತೆಯಲ್ಲೀಗ 32 ಲಕ್ಷ ರೂ.
ಮಂಗಳೂರು, ಜನವರಿ 7: ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಗೀಡಾದ ದೀಪಕ್ ರಾವ್ ಕುಟುಂಬಕ್ಕೆ ಜನರ ಸಹಾಯ ಹಸ್ತದ ಮಹಾಪೂರವೇ ಹರಿದು ಬರುತ್ತಿದೆ. ದೀಪಕ್ ರಾವ್ ಅವರ ಕುಟುಂಬದ ಸಂಕಷ್ಟಕ್ಕೆ ಜನರು ಸಂದಿಸಿದ್ದು ಅವರ ತಾಯಿ ಪ್ರೇಮಾ ಅವರ ಬ್ಯಾಂಕ್ ಖಾತೆಗೆ ಸುಮಾರು 32 ಲಕ್ಷಕ್ಕೂ ಅಧಿಕ ಧನ ಸಹಾಯ ಜಮಾ ಆಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ಫೇಸ್ಬುಕ್ ಖಾತೆಯಲ್ಲಿ ಉಲ್ಲೇಖಿಸಿದ್ದು ಸಹಾಯಹಸ್ತ ನೀಡಿದವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಜನವರಿ 3 ರಂದು ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ದಾಳಿಗೆ ದೀಪಕ್ ರಾವ್ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ದೀಪಕ್ ರಾವ್ ಒಬ್ಬರೇ ಆಧಾರಸ್ತಂಭವಾಗಿದ್ದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಈ ಪರಿಣಾಮ ದೀಪಕ್ ರಾವ್ ಕುಟುಂಬಕ್ಕೆ ಸಹಾಯಹಸ್ತಕ್ಕಾಗಿ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ #SupportDeepakFamily ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ಆರಂಭವಾಗಿತ್ತು.

ದೀಪಕ್ ರಾವ್ ಸ್ನೇಹಿತರು ಅವರ ತಾಯಿ ಖಾತೆಗೆ ಹಣ ಜಮೆ ಮಾಡುವಂತೆ ವಿನಂತಿಸಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ದೀಪಕ್ ರಾವ್ ಅವರ ಕುಟುಂಬದ ನೆರವಿಗೆ ಜನರು ಸ್ಪಂದಿಸಿದ್ದಾರೆ. ಪರಿಣಾಮ ದೀಪಕ್ ರಾವ್ ಅವರ ತಾಯಿ ಪ್ರೇಮಾ ಅವರ ಬ್ಯಾಂಕ್ ಅಕೌಂಟ್ ನಲ್ಲಿ 17 ಲಕ್ಷ ರೂಪಾಯಿ ಜಮೆಯಾಗಿತ್ತು. ಈ ಮೊತ್ತವೀಗ 32 ಲಕ್ಷ ರೂಪಾಯಿ ತಲುಪಿದೆ.
ಈ ನಡುವೆ ಶನಿವಾರ ದೀಪಕ್ ರಾವ್ ಅವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಳಿಸಿದ್ದಾರೆ.

ಇದಲ್ಲದೆ ದೀಪಕ್ ರಾವ್ ಕುಟುಂಬದ ಜೀವನಾಧಾರಕ್ಕಾಗಿ ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ರೂಪಾಯಿ ಹಾಗೂ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಸಹಕಾರದಿಂದ 5 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 10 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದಾರೆ.












Click it and Unblock the Notifications