ಹುತಾತ್ಮ ಯೋಧ ಎಚ್.ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ ಬಿಎಸ್ವೈ
ಮಂಡ್ಯ, ಫೆಬ್ರವರಿ 15 : ಪುಲ್ವಾಮದ ಅವಂತಿಪುರ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಕರ್ನಾಟಕದ ಯೋಧ ಎಚ್.ಗುರು ಅವರ ಕುಟುಂಬದವರಿಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಾಂತ್ವನ ಹೇಳಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮಕ್ಕೆ ಶುಕ್ರವಾರ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದರು. ಯೋಧ ಎಚ್.ಗುರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕುಟುಂಬದವರ ಜೊತೆ ಮಾತುಕತೆ ನಡೆಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ ಅವರು, 'ಪಾಕಿಸ್ತಾನದ ಹುಟ್ಟು ಅಡಗಿಸಬೇಕು. ದೇಶ ಒಟ್ಟಾಗಿ ಇದನ್ನು ಎದುರಿಸಬೇಕು. ಈ ವಿಚಾರದಲ್ಲಿ ಯಾರು ಕೂಡಾ ಬೇಜವಬ್ದಾರಿ ಉತ್ತರ ನೀಡಬಾರದು' ಎಂದರು.
'ಗಡಿ ಕಾಯಲು ಹೋದ ವೀರಪುತ್ರ ಗುರು ಉಗ್ರರ ದಾಳಿಯಿಂದ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಉಗ್ರರು ನೀಚ ಕೃತ್ಯ ಎಸಗಿದ್ದಾರೆ. ಶನಿವಾರ ಪ್ರಧಾನಿ ಮೋದಿ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಎಲ್ಲಾ ಪಕ್ಷಗಳ ಜೊತೆ ಚರ್ಚಿಸಿ ದಿಟ್ಟ ಕ್ರಮ ಕೈಗೊಳ್ಳಲಿದ್ದಾರೆ' ಎಂದು ಯಡಿಯೂರಪ್ಪ ಹೇಳಿದರು.
ಸರ್ಕಾರಿ ಕೆಲಸ ಕೊಡಿಸಲು ಆಗ್ರಹ : 'ಹುತಾತ್ಮ ಯೋಧ ಗುರು ಪತ್ನಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಕೆಲಸ ಕೊಡಬೇಕು. ಇಂತಹ ಕುಗ್ರಾಮದಲ್ಲಿ ಹುಟ್ಟಿ ದೇಶ ಸೇವೆ ಮಾಡಿರುವುದು ಮಾದರಿ ಕೆಲಸ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದೇವೆ' ಎಂದು ಯಡಿಯೂರಪ್ಪ ತಿಳಿಸಿದರು.












Click it and Unblock the Notifications