ಸಾಹಿತಿ ಪ್ರೊ.ಎಚ್ ಎಲ್ ಕೇಶವಮೂರ್ತಿ ನಿಧನ
ಮಂಡ್ಯ, ಮಾರ್ಚ್ 31 : ವೈಚಾರಿಕ ರಾಜಕೀಯ ವಿಡಂಬಣೆಗಳಿಗೆ ಪ್ರಸಿದ್ಧರಾಗಿದ್ದ ಸಾಹಿತಿ ಪ್ರೊ.ಎಚ್.ಎಲ್. ಕೇಶವಮೂರ್ತಿ (78) ಗುರುವಾರ ರಾತ್ರಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪತ್ರಕರ್ತ ಪಿ. ಲಂಕೇಶ್ ಗರಡಿಯಲ್ಲಿ ಪಳಗಿದ ಎಚ್ಎಲ್ಕೆ ಎಂದೇ ಪ್ರಸಿದ್ಧರಾಗಿದ್ದ ಕೇಶವಮೂರ್ತಿ ಅವರು ಕಳೆದ ಹಲವು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಗುರುವಾರ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಮಿಮ್ಸ್ ನ ತುರ್ತುನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಇವರ ನಿಧನಕ್ಕೆ ಮುಖ್ಯಮಂತ್ರಿ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಪ್ರಗತಿಪರ ಚಿಂತಕರಾದ ಗೆಳೆಯ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರ ಅಕಾಲಿಕ ಸಾವು ನನಗೆ ಆಘಾತವನ್ನುಂಟು ಮಾಡಿದೆ. ಅವರ ಕುಟುಂಬವರ್ಗದವರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/3ktp6aiy6h
— CM of Karnataka (@CMofKarnataka) March 30, 2017
ಜಿಲ್ಲೆಯ ನಾಗಮಂಗಲ ತಾಲೂಕಿನ ಹೆರಗನಹಳ್ಳಿಯಲ್ಲಿ 1939, ಡಿಸೆಂಬರ್ 28 ರಂದು ಎಚ್ .ಎಂ. ಲಿಂಗೇಗೌಡ, ತಾಯಿ ಚೆನ್ನಮ್ಮ ಪುತ್ರರಾಗಿ ಜನಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬೆಳ್ಳೂರು, ನಾಗಮಂಗಲ ಹಾಗೂ ಮೇಲುಕೋಟೆಯಲ್ಲಿ ಪೂರೈಸಿದ್ದರು.
ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ, ತಿರುಪತಿ ವೆಂಕಟೇಶ್ವರ ವಿದ್ಯಾಲಯದಲ್ಲಿ ಎಂ.ಇ ಪದವಿ ಮುಗಿಸಿ ನಂತರ ಮಂಡ್ಯ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.