ನಾಗಮಂಗಲದಲ್ಲಿ ಚೆಲುವರಾಯಸ್ವಾಮಿ ಏಕೆ ಗೆಲ್ಲಲೇ ಬೇಕು?
Recommended Video

ಮಂಡ್ಯ, ಫೆಬ್ರವರಿ 28: ಮಂಡ್ಯದಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಹೇಳುವುದಾದರೆ, ಅದು ಜೆಡಿಎಸ್ ನ ಭದ್ರಕೋಟೆ. ಈ ಕೋಟೆಯನ್ನು ಛಿದ್ರ ಮಾಡಲೆಂದೇ ಕಾಂಗ್ರೆಸ್ ನಾಯಕರು ಕಾದು ಕುಳಿತಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ನಾಗಮಂಗಲ ಕ್ಷೇತ್ರದ ಪ್ರಭಾವಿ ನಾಯಕ ಹಾಗೂ ಒಂದು ಕಾಲದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ಆಪ್ತರಾಗಿದ್ದ ಎನ್. ಚೆಲುವರಾಯಸ್ವಾಮಿ ಕಾಂಗ್ರೆಸ್ ಕಡೆಗೆ ಇರುವುದು ಒಂದಷ್ಟು ಭರವಸೆಯನ್ನು ಮೂಡಿಸಿದೆ.
ಚೆಲುವರಾಯಸ್ವಾಮಿ ಇನ್ನೂ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿಲ್ಲ. ಆದರೂ ಅವರ ಬ್ಯಾನರ್ ನಡಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೆಲುವರಾಯಸ್ವಾಮಿ ಮನೆಯಲ್ಲಿ ಮಾತುಕತೆ ನಡೆಸಿ ಹೋಗಿದ್ದಾರೆ. ಗೆಲ್ಲುವ ಕುದುರೆಯಾಗಿರುವ ಚೆಲುವರಾಯಸ್ವಾಮಿಗೆ ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.
ಜತೆಗೆ ಅವರಿಗೂ ಕೂಡ ತಾನೇ ಗೆಲ್ಲುವ ಅಭ್ಯರ್ಥಿ ಎಂಬ ವಿಶ್ವಾಸವೂ ಬಂದುಬಿಟ್ಟಿದೆ. ಹಾಗೆ ನೋಡಿದರೆ ಚೆಲುವರಾಯಸ್ವಾಮಿಗೆ ಆ ಕ್ಷೇತ್ರದಲ್ಲಿ ಪೈಪೋಟಿ ನೀಡುವವರು ಮಾಜಿ ಶಾಸಕ ಸುರೇಶ್ ಗೌಡ ಹೊರತು ಪಡಿಸಿದರೆ ಬೇರೆ ಯಾರೂ ಇಲ್ಲ. ಬಿಜೆಪಿಯಲ್ಲಿ ಅಂತಹ ನಾಯಕರಾರೂ ಕಂಡು ಬರುತ್ತಿಲ್ಲ.

ವರ್ಚಸ್ಸು ಇರುವ ನಾಯಕರಿಲ್ಲ
ಒಂದಷ್ಟು ಸಣ್ಣಪುಟ್ಟ ನಾಯಕರಿದ್ದಾರೆ. ಆದರೂ ಪ್ರಬಲ ಪೈಪೋಟಿ ನೀಡಬಲ್ಲ ವರ್ಚಸ್ಸು ಯಾರಿಗೂ ಇಲ್ಲ. ಇದುವರೆಗೆ ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಚೆಲುವರಾಯಸ್ವಾಮಿ ಗೆಲುವು ಪಡೆಯುತ್ತಾ ಬಂದಿದ್ದಾರೆ. ಇಲ್ಲಿ ಮತ ಹಾಕಿದವರು ಪಕ್ಷ ನೋಡಿ ಹಾಕಿದರೋ ವ್ಯಕ್ತಿ ನೋಡಿ ಹಾಕಿದ್ದಾರೋ ಎಂಬುದರ ಮೇಲೆ ಗೆಲುವು ನಿಂತಿದೆ.

ಗೆಲುವಿನ ಲೆಕ್ಕಾಚಾರ ಏನು?
ಒಂದು ವೇಳೆ ಪಕ್ಷ ನೋಡಿ ಜನ ವೋಟು ಹಾಕುವುದಾದರೆ ಅದರ ಹೊಡೆತ ಚೆಲುವರಾಯಸ್ವಾಮಿಗೆ ತಟ್ಟಲಿದೆ. ಅಲ್ಲದೆ ವರ್ಚಸ್ಸಿನಿಂದಲೇ ಗೆಲ್ಲುತ್ತೇನೆ ಎನ್ನುವುದಾದರೆ ಒಂದಷ್ಟು ಮಂದಿ ಅವರನ್ನು ಗುರುತಿಸಿ, ಇನ್ನೊಂದಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು ನೋಡಿ ವೋಟು ಹಾಕಿದರೆ ಆಗ ಗೆಲುವು ಚೆಲುವರಾಯಸ್ವಾಮಿ ಅವರದೇ ಆಗಿಬಿಡುತ್ತದೆ.

ಚೆಲುವರಾಯಸ್ವಾಮಿ ವರ್ಸಸ್ ಸುರೇಶ್ ಗೌಡ
ಈಗಿನ ಬೆಳವಣಿಗೆಯಂತೆ ಕಾಂಗ್ರೆಸ್ ನಿಂದ ಚೆಲುವರಾಯಸ್ವಾಮಿ ಮತ್ತು ಜೆಡಿಎಸ್ ನಿಂದ ಸುರೇಶ್ ಗೌಡ ಅವರು ಸ್ಪರ್ಧಿಸುವುದು ಬಹುತೇಕ ಖಚಿತ. ಬಿಜೆಪಿ ಇನ್ನೂ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಏನೇ ಆದರೂ ಪಕ್ಕಾ ಪೈಪೋಟಿ ನಡೆಯುವುದು ಚೆಲುವರಾಯಸ್ವಾಮಿ ಮತ್ತು ಸುರೇಶ್ ಗೌಡರ ನಡುವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಜೆಡಿಎಸ್ ಮಟ್ಟ ಹಾಕಲು ನಡೆದಿದೆ ತಂತ್ರ
ಒಂದು ವೇಳೆ ಬಿಜೆಪಿ ಒಳ್ಳೆಯ ಅಭ್ಯರ್ಥಿಯನ್ನು ನಿಲ್ಲಿಸಿದ್ದೇ ಆದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಾಗಿರುತ್ತಿತ್ತೇನೋ! ಆದರೆ ಅದು ಯಾವುದೂ ಆಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈಗಾಗಲೇ ಜೆಡಿಎಸ್ ವಿರುದ್ಧ ಸಿಡಿದೆದ್ದಿರುವ ಚೆಲುವರಾಯಸ್ವಾಮಿ ಅವರು ಕಾಂಗ್ರೆಸ್ ಗೆಲುವಿಗೆ ಬೇಕಾದ ತಂತ್ರ ಮತ್ತು ಜೆಡಿಎಸ್ ಅನ್ನು ಮಟ್ಟಹಾಕಲು ಬೇಕಾದ ಕುತಂತ್ರವನ್ನು ಬಳಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಮಾವೇಶ
ಮುಂದಿನ ದಿನಗಳಲ್ಲಿ ತಮ್ಮ ಬೆಂಬಲಿಗರ ಸಹಕಾರದೊಂದಿಗೆ ದೊಡ್ಡ ಮಟ್ಟದ ಸಮಾವೇಶ ನಡೆಸಿ, ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಯಾಗುವ ಯೋಚನೆಯೂ ಅವರಿಗೆ ಇದೆ ಎನ್ನಲಾಗುತ್ತಿದೆ. ಅದು ಏನೇ ಇರಲಿ, ಈ ಬಾರಿ ಚೆಲುವರಾಯಸ್ವಾಮಿಗೆ ಗೆಲುವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೇ ಕಷ್ಟವೂ ಅಲ್ಲ ಎಂಬುದಂತೂ ಸತ್ಯ.











Click it and Unblock the Notifications