ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಮಂಡ್ಯ ರೈತರು ಫುಲ್ ಗರಂ
ಮಂಡ್ಯ, ಅಕ್ಟೋಬರ್ 4: ಮಂಡ್ಯದ ರೈತರ ಬೆಳೆಗಳಿಗೆ ನೀರು ಹರಿಸುವ ನೆಪದಲ್ಲಿ ಕೃಷ್ಣರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ ಸೋಮವಾರ ರಾತ್ರಿಯಿಂದ ಸರಕಾರ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಕೆಆರ್ ಎಸ್ ಗೇಟ್ ಎದುರು ಅಹೋರಾತ್ರಿ ಧರಣಿ ನಡೆಸಿದರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮುಂದಾಳತ್ವದಲ್ಲಿ ಸೋಮವಾರ ರಾತ್ರಿಯಿಂದಲೇ ಧರಣಿ ನಡೆಸುತ್ತಿರುವ ಕಾರ್ಯಕರ್ತರು, ಮಂಗಳವಾರ ಸ್ಥಳದಲ್ಲೇ ಅಡುಗೆ ಮಾಡಿ ಸಹಭೋಜನ ಮಾಡಿದರು. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ ಎಂದು ಮುಖಂಡ ಕೆ.ಎಸ್.ನಂಜುಂಡೇಗೌಡ ತಿಳಿಸಿದ್ದಾರೆ.['ದೊಡ್ಮನೆ'ಗಾಗಿ ಸಾರಿ ಕೇಳಿದರೆ ಕ್ಷಮಿಸಲು ನಾವು 'ದಡ್ಮನೆ'ಯವರೇ?]
ಜಿಲ್ಲಾಡಳಿತದಿಂದ ಕೆಆರ್ ಎಸ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಮೂವತ್ತಕ್ಕೂ ಹೆಚ್ಚು ರೈತರು ಧರಣಿ ಮುಂದುವರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೃಷ್ಣರಾಜ ಸಾಗರ ಜಲಾಶಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸೋಮವಾರ ರಾತ್ರಿಯಿಂದ ನೀರು
ರೈತರ ಬೆಳೆಗಳಿಗೆ ಕೆಆರ್ ಎಸ್ ಜಲಾಶಯದಿಂದ ನೀರು ಹರಿಸುವ ವಿಚಾರವಾಗಿ ಸೋಮವಾರ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು, ಸೋಮವಾರ ರಾತ್ರಿಯಿಂದಲೇ 6,856 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಈ ಪೈಕಿ ತಮಿಳುನಾಡಿಗೆ ನದಿಯ ಮೂಲಕ 4,000 ಕ್ಯೂಸೆಕ್ ಮತ್ತು 2856 ಕ್ಯೂಸೆಕ್ ನೀರು ರೈತರ ಬೆಳೆಗಳಿಗೆ ಕಾಲುವೆ ಮೂಲಕ ಹರಿಸಲಾಗಿದೆ.

ಕೆಆರ್ ಎಸ್.ನ ಇಂದಿನ ಮಟ್ಟ
ಕೆಆರ್ ಎಸ್ ನ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಸದ್ಯಕ್ಕೆ 89.31 ಅಡಿ ನೀರಿದೆ. ಜಲಾಶಯದ ಒಳ ಹರಿವು 877 ಕ್ಯೂಸೆಕ್, ಹೊರ ಹರಿವು 6,856 ಕ್ಯೂಸೆಕ್ ಇದೆ.

ರಾಜ್ಯ ಸರಕಾರದ ವಿರುದ್ಧ ಆಕ್ರೋಶ
ಇನ್ನು ಮಂಡ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ರಸ್ತೆಗಳಲ್ಲಿ ಟೈರ್ ಗೆ ಬೆಂಕಿ ಹಚ್ಚಲಾಗಿದೆ. ಆಕ್ರೋಶಗೊಂಡಿರುವ ಪ್ರತಿಭಟನಾ ನಿರತರು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಬೆಳೆಗೆ ಮಾತ್ರ ನೀರು ಹರೀತಿದೆ
ಕೃಷ್ಣರಾಜ ಸಾಗರ ಜಲಾಶಯದಿಂದ ಸರಕಾರ ಬಿಟ್ಟಿರುವ ನೀರು ರೈತರ ಬೆಳೆಗಳಿಗೆ ಹೊರತು ತಮಿಳುನಾಡಿಗಲ್ಲ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರು ರಾಜ್ಯ ಸರಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಲೀಕೇಜ್ ಸಮಸ್ಯೆ
ಈ ಬಗ್ಗೆ ಎರಡೂ ಸದನಗಳಲ್ಲೂ ನಿರ್ಣಯ ಕೈಗೊಂಡು, ಸೋಮವಾರ ರಾತ್ರಿಯಿಂದಲೇ ಬೆಳೆಗಳಿಗೆ ನೀರು ಹರಿಸುತ್ತಿದೆ. ಜಲಾಶಯದಲ್ಲಿ ಲೀಕೇಜ್ ಇರುವುದರಿಂದ ಕಾಲುವೆಗಳಿಗೆ ನೀರು ಬಿಟ್ಟಾಗ 1500 ಕ್ಯೂಸೆಕ್ ನಷ್ಟು ನೀರು ನದಿಗೆ ಹರಿಯುತ್ತದೆ. ಇದನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.












Click it and Unblock the Notifications