ನಿಖಿಲ್ ಅಭಿಮನ್ಯು, ನಾನು ಅರ್ಜುನ, ಮಂಡ್ಯ ಚಕ್ರವ್ಯೂಹ ಭೇದಿಸುತ್ತೇವೆ: ಕುಮಾರಸ್ವಾಮಿ
ಮಂಡ್ಯ, ಮಾರ್ಚ್ 25: ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್, ಮಂಡ್ಯದ ಚಕ್ರವ್ಯೂಹವನ್ನು ಭೇದಿಸಲಾರ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಂದು ಚಕ್ರವ್ಯೂಹ ಭೇದಿಸಲು ಹೊರಟ ಅಭಿಮನ್ಯು ಜೊತೆ ಅವರಪ್ಪ ಇರಲಿಲ್ಲ, ಇಂದು ಈ ಅಭಿಮನ್ಯು ಜೊತೆ ಅಪ್ಪ ಆದ ನಾನು ಇದ್ದೇನೆ ಎಂದು ಕುಮಾರಸ್ವಾಮಿ ಅಬ್ಬರಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ಬಳಿಕ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅಂದು ಅಭಿಮನ್ಯು ಜೊತೆ ಅವರ ಅಪ್ಪ ಅರ್ಜುನ ಇದ್ದಿದ್ದರೆ ಚಕ್ರವ್ಯೂಹ ಭೇದಿಸುತ್ತಿದ್ದ, ಆದರೆ ಇರಲಿಲ್ಲ, ಆದರೆ ನಾನು ಇಂದು ನಿಖಿಲ್ ಜೊತೆ ಇದ್ದೇನೆ, ಅವನು ಮಂಡ್ಯದ ರಾಜಕೀಯ ಚಕ್ರವ್ಯೂಹ ಭೇದಿಸಲು ನಾನು ಅರ್ಜುನ ಪಾತ್ರಧಾರಿಯಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
'ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ
ಮಂಡ್ಯಕ್ಕೆ ಒಟ್ಟು 8750 ಕೋಟಿ ಅನುದಾನವನ್ನು ಈಗಾಗಲೇ ನೀಡಿದ್ದೇನೆ, ಆದರೆ ಬಿಜೆಪಿ ಮುಖಂಡರು ನಾನು ಮಂಡ್ಯ ಅಭಿವೃದ್ಧಿಗೆ ನೀಡಿದ ಕಾರ್ಯಕ್ರಮಗಳನ್ನು ಟೀಕಿಸಿದ್ದಾರೆ, ಮಂಡ್ಯದ ಬಜೆಟ್, ಮಂಡ್ಯದ ಮುಖ್ಯಮಂತ್ರಿ ಎಂದು ವ್ಯಂಗ್ಯ ಮಾಡಿದ್ದಾರೆ, ಅಂತಹವರ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುತ್ತೀರಾ ಎಂದು ಸೇರಿದ್ದ ಭಾರಿ ಜನಸ್ತೋಮವನ್ನು ಕುಮಾರಸ್ವಾಮಿ ಪ್ರಶ್ನಿಸಿದರು.
'ನಿಖಿಲ್ ಎಂಬ ಸಸಿಯನ್ನು ಮಂಡ್ಯ ಅಂಗಳಕ್ಕೆ ಹಾಕಿದ್ದೇನೆ'
ಮಂಡ್ಯ ಜನರು ಜೆಡಿಎಸ್ ಮೇಲೆ ಪ್ರೀತಿಯಿಂದ ಎಂಟು ಕ್ಷೇತ್ರದಲ್ಲಿ ಗೆಲ್ಲಿಸಿದ್ದಾರೆ. ಅವರ ಮೇಲಿರುವ ಗೌರವದಿಂದಲೇ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯಕ್ಕೆ ಅಭ್ಯರ್ಥಿ ಮಾಡಿದ್ದೇನೆ, ಮಂಡ್ಯದ ಅಂಗಳಕ್ಕೆ ನಿಖಿಲ್ ಎಂಬ ಸಸಿಯನ್ನು ಹಾಕಿದ್ದೇನೆ, ಅದು ಬೆರೆದು ಬಡವರಿಗೆ ನೆರಳು ನೀಡಲಿದೆ. ಅದನ್ನು ಮರವಾಗಿ ಬೆಳೆಸುವ ಜವಾಬ್ದಾರಿ ನಿಮ್ಮದು ಎಂದು ಭಾವನಾತ್ಮಕವಾಗಿ ಕುಮಾರಸ್ವಾಮಿ ಮಾತನಾಡಿದರು.
ಬಿಜೆಪಿ ಪಟ್ಟಿ ಬಿಡುಗಡೆ: ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಣೆ
ನಾನು-ಡಿಕೆಶಿ ನಿಜವಾದ ಜೋಡೆತ್ತು
ಸುಮಲತಾ ಪರ ಪ್ರಚಾರ ಮಾಡಿದ್ದ ಯಶ್-ದರ್ಶನ್ 'ನಾವಿಬ್ಬರೂ ಜೋಡೆತ್ತು' ಅಂದಿದ್ದ ಹೇಳಿಕೆಗೆ ಟಾಂಗ್ ನೀಡಿದ ಕುಮಾರಸ್ವಾಮಿ, 'ನಾನು, ಡಿಕೆ ಶಿವಕುಮಾರ್ ನಿಜವಾದ ಜೋಡೆತ್ತು, ಅವರು ಅರ್ಧರಾತ್ರಿಯಲ್ಲಿ ಬಂದು ರೈತನ ಬೆಳೆ ತಿಂದು ನಾಶ ಮಾಡುವ ಜೋಡೆತ್ತುಗಳು, ನಾವು ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುವ ಜೋಡೆತ್ತುಗಳು' ಎಂದರು. ಕುಮಾರಸ್ವಾಮಿ ಮಾತಿಗೆ ಭಾರಿ ಕರತಾಡನ ವ್ಯಕ್ತವಾಯಿತು, ಡಿಕೆಶಿ ಸಹ ನಗುತ್ತಾ ತಮ್ಮ ಸಹಮತ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯ ಗೆಲ್ಲಿಸಿಯೇ ಸಿದ್ಧ: ಡಿಕೆ.ಶಿವಕುಮಾರ್
ಸುಮಲತಾ ಯಾರಿಗೂ ಸಹಾಯ ಮಾಡಿಲ್ಲ: ಎಚ್ಡಿಕೆ
ನಾನು ಎಂದೂ ಜಾತಿ, ಧರ್ಮ ಕೇಳಿ ಜನರಿಗೆ ಸಹಾಯ ಮಾಡಿಲ್ಲ, ನನ್ನ ಬಳಿ ಬಂದ ಎಲ್ಲರಿಗೂ ಸಹಾಯ ಮಾಡಿದ್ದೇನೆ, ಆದರೆ ಮಂಡ್ಯದಲ್ಲಿ ಚುನಾವಣೆಗೆ ನಿಂತಿರುವ ಪಕ್ಷೇತರ ಅಭ್ಯರ್ಥಿ ಒಬ್ಬರಿಗಾದರೂ ಸಹಾಯ ಮಾಡಿರುವ ಉದಾಹರಣೆ ಇದ್ದರೆ ಹೇಳಲಿ ತಲೆಬಾಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ತನ್ನಿಂದ ಸಹಾಯ ಪಡೆದು ಮಾರಣಾಂತಿಕ ಕಾಯಿಲೆಯಿಂದ ಪಾರಾದ ಮಗು ಜೆಡಿಎಸ್ನ ತೆನೆ ಹೊತ್ತ ಮಹಿಳೆಯ ವೇಷ ಧರಿಸಿ ಸಮಾವೇಶಕ್ಕೆ ಬಂದಿರುವುದನ್ನು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?
ನಿಖಿಲ್ ಗೆ ಮತ, ಅಭಿವೃದ್ಧಿಗೆ ಮತ: ಎಚ್ಡಿಕೆ
ಕಾವೇರಿ ನೀರಾವರಿ ಯೋಜನೆಗಳಿಗೆ ಆರು ಸಾವಿರ ಕೋಟಿ ಖರ್ಚು ಎತ್ತಿಡಲಾಗಿದೆ. ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಲಾಗುತ್ತಿದೆ, ವರ್ಷದಲ್ಲಿ ಒಂದು ಬಾರಿ ಭತ್ತ ಬೆಳೆದು, ಮತ್ತೊಂದು ಬೆಳೆಗೆ ಹುರುಳಿ ಹಾಕುತ್ತಿದ್ದರು, ನಾನು ಬಂದ ಮೇಲೆ ಎರಡು ಬೆಳೆಗೆ ಭತ್ತವನ್ನು ಬೆಳೆಯುವಂತಾಗಿದೆ. ನಿಖಿಲ್ಗೆ ನೀಡುವ ಮತ ಮಂಡ್ಯದ ಅಭಿವೃದ್ಧಿಗೆ ನೀಡುವ ಮತ, ಯಾವುದೇ ಉದ್ದೇಶಗಳೇ ಇಲ್ಲದೆ ರಾಜಕೀಯ ಪ್ರವೇಶ ಮಾಡಿದವರನ್ನು ನಂಬಬೇಡಿ, ಅಭಿವೃದ್ಧಿಗಾಗಿ ಜೀವ ತೇಯುತ್ತಿರುವವರನ್ನು ಬೆಂಬಲಿಸಿ ಎಂದು ಕುಮಾರಸ್ವಾಮಿ ಹೇಳಿದರು.