ಮಂಡ್ಯದ ವಳಗೆರೆಹಳ್ಳಿಯಲ್ಲಿ ದಲಿತರಿಗೆ ಕ್ಷೌರ ನಿರಾಕರಿಸುತ್ತಿರುವುದು ನಿಜವೇ?
ಮಂಡ್ಯ, ಸೆಪ್ಟೆಂಬರ್ 5: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಸ್ಸಿ ಎಸ್ಟಿ ಆಯೋಗದ ಅಧ್ಯಕ್ಷ ಮುನಿಯಪ್ಪ ಮುಂದಾಗಿದ್ದಾರೆ.
ದಲಿತ ಮುಖಂಡ ಭಾನುಪ್ರಕಾಶ್ ಎಂಬುವರು ವಳಗೆರೆಹಳ್ಳಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿರಾಕರಣೆ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಇದು ಭಾರೀ ಸುದ್ದಿಗೆ ಗ್ರಾಸವಾಗಿದ್ದು, ಈ ಕುರಿತ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ಎಸ್ಸಿ ಎಸ್ಟಿ ಆಯೋಗದ ಅಧ್ಯಕ್ಷ ಮುನಿಯಪ್ಪ ಅವರು ಭೇಟಿ ನೀಡಿ ಮೊದಲಿಗೆ ದಲಿತ ಮುಖಂಡ ಭಾನುಪ್ರಕಾಶ್ ಅವರ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿದರು. ಬಳಿಕ ಊರಿನ ಇತರೆ ಮುಖಂಡರನ್ನು ಭೇಟಿ ಮಾಡಿ ಅವರಿಂದಲೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದರು.

ಈ ವೇಳೆ ಮಾತನಾಡಿದ ಮುನಿಯಪ್ಪ ಅವರು, ಮೇಲ್ನೋಟಕ್ಕೆ ದಲಿತ ಮುಖಂಡ ಭಾನುಪ್ರಕಾಶ್ ಅವರು ಹಾಗೂ ಇದೇ ರೀತಿ ಸವರ್ಣೀಯ ಮುಖಂಡರು ನೀಡಿರುವ ಕೆಲ ಹೇಳಿಕೆಗಳಲ್ಲೂ ವ್ಯತ್ಯಾಸ ಕಂಡು ಬಂದಿದೆ. ಈ ಸಮಸ್ಯೆ ಕುರಿತು ಅಧಿಕಾರಿಗಳೊಡನೆ ಹಾಗೂ ಎರಡು ಪಂಗಡಗಳ ಮುಖಂಡರಿಂದ ಸಮಗ್ರ ಮಾಹಿತಿ ಪಡೆದು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ವಿ.ಕೆ.ಶ್ರೀನಿವಾಸಕುಮಾರ್ ಮಾತನಾಡಿ, ನಮ್ಮ ಊರಿನಲ್ಲಿ ಯಾವುದೇ ಅಸ್ಪೃಶ್ಯ ಆಚರಣೆ ಇಲ್ಲ. ಕ್ಷೌರ ವಿಚಾರದಲ್ಲಿ ಭಾನುಪ್ರಕಾಶ್ ಸುಖಾಸುಮ್ಮನೆ ವಿವಾದ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೌರಿಕ ಶ್ರೀನಿವಾಸ್ ಅವರಿಗೆ ಪ್ರತ್ಯೇಕವಾಗಿ ಅಂಗಡಿಯಿಡಲು ಗ್ರಾಮ ಪಂಚಾಯಿತಿಗೆ ಸೇರಿದ ನಿವೇಶನ ನೀಡಲು ನಿರ್ಣಯ ಕೈಗೊಂಡಿದ್ದೇವೆ. ಸದರಿ ನಿವೇಶನದಲ್ಲಿ ಭಾನುಪ್ರಕಾಶ್ ಕುಟುಂಬ ವಾಸವಾಗಿಲ್ಲ. ಹೀಗಾಗಿ ಇದನ್ನು ತೆರವುಗೊಳಿಸಿ ಅಲ್ಲಿ ಕ್ಷೌರದಂಗಡಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ವಿಚಾರದಲ್ಲಿ ನಾವು ಯಾವುದೇ ಬಗೆಯ ಅಸ್ಪøಶ್ಯತಾ ಆಚರಣೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭ ಆಗಮಿಸಿ ಭಾನುಪ್ರಕಾಶ್ ಸಹೋದರ ಶೇಖರ್ ಮಾತನಾಡಿ, ವಳಗೆರೆಹಳ್ಳಿಯಲ್ಲಿ ಯಾವುದೇ ಬಗೆಯ ಅಸ್ಪೃಶ್ಯತಾ ಆಚರಣೆ ನಡೆದಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ. ನನ್ನ ಸಹೋದರ ಭಾನುಪ್ರಕಾಶ್ ಪ್ರತಿಷ್ಠೆಗಾಗಿ ವಿವಾದ ಸೃಷ್ಟಿಸಿದ್ದು, ಇದಕ್ಕೆ ಮಾನ್ಯತೆ ನೀಡಬಾರದು ಎಂದು ವಿನಂತಿಸಿದ್ದಾರೆ.
ಇನ್ನೊಂದೆಡೆ ವಳೆಗೆರೆಹಳ್ಳಿ ದಲಿತ ಮೇಲಿನ ದೌರ್ಜನ್ಯ ಸಂಬಂಧ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪರಿಶಿಷ್ಟಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಹಾಗೂ ದಲಿತ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ವಳಗೆರೆಹಳ್ಳಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ಹೀಗಾಗಿ ಸಮಸ್ಯೆ ಉಲ್ಬಣಗೊಂಡಿದೆ. ಪಿಡಿಒ ರೂಪೇಶ್ ಕುಮಾರ್ ಈ ವಿಚಾರದಲ್ಲಿ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅವರ ಮೇಲೆ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿ ಎಂದು ಸ್ಥಳದಲ್ಲಿದ್ದ ತಹಸೀಲ್ದಾರ್ ಹರ್ಷ ಅವರಿಗೆ ಆದೇಶಿಸಿದ್ದಾರೆ.












Click it and Unblock the Notifications