ಮುಳುಕಟ್ಟಮ್ಮ ದೇವಸ್ಥಾನದಲ್ಲಿ ಪೂಜೆಗಾಗಿ ಬಡಿದಾಟ: 13 ಮಂದಿ ಬಂಧನ
ಮಂಡ್ಯ, ಜೂನ್ 7: ಮಂಡ್ಯದ ನಾಗಮಂಗಲ ತಾಲೂಕಿನ ಮುಳುಕಟ್ಟೆ ಗ್ರಾಮದಲ್ಲಿರುವ ಪ್ರಸಿದ್ಧ ಮುಳುಕಟ್ಟಮ್ಮ ದೇವಾಲಯದ ಪೂಜೆ ವಿಚಾರವಾಗಿ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆ ಸಂಬಂಧ 13 ಮಂದಿಯನ್ನು ಬಂಧಿಸಲಾಗಿದೆ.
ದೇವಾಲಯದ ಪೂಜೆ ಸಂಬಂಧವಾಗಿ ಟ್ರಸ್ಟ್ ಎರಡು ಬಣಗಳನ್ನು ನಿರ್ಮಿಸಿತ್ತು. ಕಾರಣಾಂತರಗಳಿಂದ ಒಂದು ಬಣದವರು ಪೂಜೆಯಿಂದ ಹೊರಗುಳಿದಿದ್ದರು. ಅನೇಕ ವರ್ಷಗಳ ಕಾಲ ಪೂಜೆಯಿಂದ ಹೊರಗುಳಿದಿದ್ದ ಬಣದವರು, ಏಕಾಏಕಿ ದೇವಾಲಯಕ್ಕೆ ಬಂದು ಪೂಜೆ ವಿಚಾರ ಮಾತನಾಡಿದ್ದಾರೆ. ವಾದ ವಿವಾದ ಹೆಚ್ಚಾಗಿ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ. ಎರಡೂ ಬಣದವರು ಕೈ ಕೈ ಮಿಲಾಯಿಸಿದ್ದಾರೆ.
ಪೂಜೆಯಿಂದ ಹೊರಗುಳಿದಿದ್ದ ಬಣದವರು ದೇವಾಲಯವನ್ನು ಒಳಗಿನಿಂದ ಬೀಗ ಹಾಕಿಕೊಂಡು ಮಾರಕಾಸ್ತ್ರಗಳಿಂದ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೇವಾಲಯದ ಹಾಲಿ ಅರ್ಚಕರು ಪೊಲೀಸ್ ಇಲಾಖೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ದೇವಾಲಯದ ಮುಖ್ಯದ್ವಾರವನ್ನು ಒಡೆದು ಒಳಹೋಗಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದ್ದು, ಈ ಸಂಬಂಧ 13 ಮಂದಿಯನ್ನು ಬಂಧಿಸಿದ್ದಾರೆ.












Click it and Unblock the Notifications