ಬುದ್ಧಿವಾದ ಹೇಳಿದ್ದಕ್ಕೆ ಬದುಕನ್ನೇ ಕೊನೆಗೊಳಿಸಿದ ಹದಿನೇಳರ ಪೋರರು
ಗಾಂಜಾ ಅಭ್ಯಾಸ ಬಿಟ್ಟು ನೆಟ್ಟಗೆ ಬಾಳಿ ಎಂದು ಬುದ್ಧಿ ಹೇಳಿದ ಕಾರಣಕ್ಕೆ ಮಳವಳ್ಳಿಯ ಜೆಡಿಎಸ್ ಕಾರ್ಯಕರ್ತ ಕೇಬಲ್ ಕುಮಾರ್ ನ ಕೊಲೆ ಮಾಡಿದವರು ಹದಿನೇಳು ವಯಸ್ಸಿನ ಪೋರರು. ಸದ್ಯಕ್ಕೆ ಇಬ್ಬರನ್ನು ಬಂಧಿಸಲಾಗಿದೆ. ಮತ್ತೊಬ್ಬ ನಾಪತ್ತೆಯಾಗಿದ್ದಾನೆ
ಮಂಡ್ಯ, ಡಿಸೆಂಬರ್ 28: ಇತ್ತೀಚೆಗೆ ಮಳವಳ್ಳಿಯಲ್ಲಿ ನಡೆದಿದ್ದ ಜೆಡಿಎಸ್ ಕಾರ್ಯಕರ್ತ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಳವಳ್ಳಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ. ಬಂಧಿತರು ಪ್ರಮೋದ್ (17), ದರ್ಶನ್ (16) ಅಪ್ರಾಪ್ತರಾಗಿದ್ದು, ಮತ್ತೊಬ್ಬ ಆರೋಪಿ ಕೀರ್ತಿ ಎಂಬಾತನ ಪತ್ತೆಗೆ ಶೋಧ ನಡೆಯುತ್ತಿದೆ.
ಗಾಂಜಾ, ಕುಡಿತ, ಧೂಮಪಾನದ ದಾಸರಾಗಿದ್ದ ಈ ಮೂವರು ಯಾರ ಮಾತಿಗೂ ಸೊಪ್ಪು ಹಾಕದೆ ಜೀವನ ಸಾಗಿಸಿದ್ದರು. ಈ ಕುರಿತಂತೆ ಕೇಬಲ್ ಕುಮಾರ್ ಅವರಿಗೆ ಬುದ್ದಿವಾದ ಹೇಳಿದ್ದ. ಆದರೆ ಇದನ್ನು ಕೇಳದ ಮೂವರು ಆತನ ವಿರುದ್ಧವೇ ತಿರುಗಿ ಬಿದ್ದಿದ್ದರು. ಅಲ್ಲದೆ ಕೇಬಲ್ ಕುಮಾರ್ ನೊಂದಿಗೆ ಹಣಕಾಸಿನ ವ್ಯವಹಾರ ಮಾಡಿದ್ದ ಆರೋಪಿಗಳು ಹಣ ನೀಡದೆ ಸತಾಯಿಸುತ್ತಾ ತಿರುಗಾಡುತ್ತಿದ್ದರು.[ಕಟ್ಟಿಂಗ್ ಮಷಿನ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ]

ಸಾಲವನ್ನು ವಾಪಸ್ ಕೊಡುವಂತೆ ಕೇಳಿದ್ದ ಕುಮಾರ್, ಅಪ್ರಾಪ್ತರಾಗಿದ್ದ ಪ್ರಮೋದ್, ದರ್ಶನ್ ಗೆ ಹೆಂಡ, ಗಾಂಜಾ ಅಂತ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಬುದ್ಧಿವಾದ ಹೇಳಿದ್ದ. ಇದರಿಂದ ಕೋಪಗೊಂಡ ದರ್ಶನ್ ಮತ್ತು ಪ್ರಮೋದ್, ಗೆಳೆಯ ಕೀರ್ತಿ ಜೊತೆ ಸೇರಿ ಬೈಕ್ ನಲ್ಲಿ ಬರುತ್ತಿದ್ದ ಕುಮಾರ್ ನನ್ನು ಹಗಲಿನಲ್ಲಿಯೇ ಅಡ್ಡಗಟ್ಟಿ, ಆತನ ಕಣ್ಣಿಗೆ ಖಾರದಪುಡಿ ಎರಚಿ, ರಾಡುಗಳಿಂದ ಎದೆಯ ಭಾಗಕ್ಕೆ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದರು.[ಮೈಸೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ]
ಪ್ರಕರಣ ದಾಖಲಿಸಿಕೊಂಡಿದ್ದ ಮಳವಳ್ಳಿ ಠಾಣೆ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಕೀರ್ತಿ ಅಪರಾಧ ಹಿನ್ನೆಲೆಯವನಾಗಿದ್ದು, ಈತ ಇದಕ್ಕೂ ಮೊದಲು ಬೆಂಗಳೂರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿ, ಜಾಮೀನಿನ ಮೇಲೆ ಹೊರ ಬಂದಿದ್ದ. ಆತನ ಪತ್ತೆಗೆ ಬಿರುಸಿನ ತನಿಖೆ ನಡೆದಿದೆ.












Click it and Unblock the Notifications