ಕಾವೇರಿ ಪುಷ್ಕರಕ್ಕಾಗಿ ಶ್ರೀರಂಗಪಟ್ಟಣಕ್ಕೆ ಹರಿದುಬಂದ ಭಕ್ತ ಸಾಗರ
ಮಂಡ್ಯ, ಸೆಪ್ಟೆಂಬರ್ 18: ಶ್ರೀರಂಗಪಟ್ಟಣದ ಕಾವೇರಿ ನದಿದಡದಲ್ಲಿ ನಡೆಯುತ್ತಿರುವ ಕಾವೇರಿ ಮಹಾಪುಷ್ಕರಕ್ಕೆ ಸೆ.17 ರಂದು ಸಹಸ್ರಾರು ಭಕ್ತರು ಆಗಮಿಸಿ, ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಸೆ.12ರ ರಿಂದ ಕಾವೇರಿ ಮಹಾ ಪುಷ್ಕರ ಮೇಳ ನಡೆಯುತ್ತಿದ್ದು ಪ್ರತಿದಿನವೂ ಭಕ್ತರು ಆಗಮಿಸುತ್ತಿದ್ದಾರೆಯಾದರೂ ಭಾನುವಾರ ರಜಾದಿನವಾದ್ದರಿಂದ ಜಿಲ್ಲೆ ರಾಜ್ಯ ಸೇರಿದಂತೆ ಸಹಸ್ರಾರು ಭಕ್ತರು ಆಗಮಿಸಿದ್ದರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಭಕ್ತರಿಂದ ತುಂಬಿ ತುಳುಕುತ್ತಿತ್ತು.

ಎಲ್ಲೆಂದರಲ್ಲಿ ವಾಹನ ಮತ್ತು ಜನರು ಕಂಡು ಬಂದರು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮೊದಲಾದ ಕಡೆಗಳಿಂದ ಬಂದಿದ್ದ ಯತಿಗಳು ಹಾಗೂ ಭಕ್ತರು ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ನಿಮಿಷಾಂಭ ದೇವಾಲಯ, ಘೋಸಾಯಿಘಾಟ್, ಪಶ್ಚಿಮವಾಹಿನಿ, ಕಾವೇರಿ ಸ್ನಾನಘಟ್ಟ ಸೇರಿದಂತೆ ಪಟ್ಟಣದ ಕಾವೇರಿ ನದಿ ತೀರದಲ್ಲಿ ಭಕ್ತರ ದಂಡು ಕಂಡುಬಂತು. ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಭಕ್ತರು ಸರತಿ ಸಾಲಿನಲ್ಲಿ ಗಂಟೆಗಳ ಕಾಲ ನಿಲ್ಲಬೇಕಾಯಿತು. ಅಲ್ಲದೆ ಸುಮಾರು 4 ಕಿ.ಮೀ. ದೂರ ವಾಹನಗಳ ದಟ್ಟಣೆ ಕಂಡುಬಂದಿತು.
ಸಂಚಾರಿ ದಟ್ಟಣೆ ಹಾಗೂ ಭಕ್ತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದೆಂಬ ಕಾರಣಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಪಟ್ಟಣದಾದ್ಯಂತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿತ್ತು. ನಿಮಿಷಾಂಭ, ಕಾವೇರಿ ಸ್ನಾನಘಟ್ಟ, ಗೋಸಾಯಿಘಾಟ್, ಪಶ್ಚಿಮವಾಹಿನಿಗಳಲ್ಲಿ ಹೆಚ್ಚಿನ ಪೊಲೀಸರಿದ್ದರು.

ನದಿಯಲ್ಲಿ ಸ್ವಲ್ಪ ದೂರ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ತಂತಿ ಬೇಲಿಯ ಬ್ಯಾರಿಕೇಡ್ ಅನ್ನು ಅಳವಡಿಸಿ, ಅನಾಹುತಗಳು ನಡೆಯದಂತೆ ಎಚ್ಚರ ವಹಿಸಲಾಗಿತ್ತು. ದೂರ ನದಿಯಲ್ಲಿ ಈಜಿಕೊಂಡು ಹೋಗುವ ಯುವಕರನ್ನು ಆಗಾಗ್ಗೆ ಪೊಲೀಸರು ಎಚ್ಚರಿಸುತ್ತಿದ್ದದ್ದು ಕಂಡು ಬಂತು.
ಕಾವೇರಿ ನದಿಯ ಸಂಗಮದಲ್ಲಿ ಸಾಕಷ್ಟು ಸುಳಿಗಳಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ನಿಷೇಧ ಹೇರಿತ್ತು. ನಿಷೇಧದ ನಡುವೆಯೂ, ಭಕ್ತರು ಮಾತ್ರ ಅದನ್ನು ಲೆಕ್ಕಿಸದೆ ಸ್ನಾನಾದಿ ಪೂಜಾ ಕಾರ್ಯ ಮಾಡುತ್ತಿದ್ದುದು ಕಂಡುಬಂತು. ಸೆ.18ರಂದು ಗಂಜಾಂ ನಿಮಿಷಾಂಭಾ ದೇವಾಲಯ ಹಾಗೂ ಸೆ.19ರಂದು ದೊಡ್ಡ ಗೋಸಾಯಿಘಾಟ್ ಬಳಿ ಸಂಜೆ 5ಕ್ಕೆ ಕಾವೇರಿ ಮಹಾ ಪುಷ್ಕರದ ಪೂಜಾ ಕೈಂಕರ್ಯಗಳು ನಡೆಯಲಿವೆ.












Click it and Unblock the Notifications