ದೇಗುಲದ ಹುಂಡಿ ಕಳ್ಳನಿಗೆ ಬಿತ್ತು ಕೆಆರ್ ಪೇಟೆಯಲ್ಲಿ ಸಕತ್ತು ಗೂಸಾ!
ಮಂಡ್ಯ, ಜೂನ್ 2: ಕೆ.ಆರ್.ಪೇಟೆ ತಾಲೂಕಿನ ನಗರೂರು-ಮಾರ್ಗೋನಹಳ್ಳಿ ಗ್ರಾಮದ ಮರಡಿಲಿಂಗೇಶ್ವರ ಸ್ವಾಮಿ ದೇವಸ್ಥಾನ ಹುಂಡಿ ಕಳವು ಮಾಡುವಾಗ ಸಿಕ್ಕಿ ಬಿದ್ದ ಕಳ್ಳನೊಬ್ಬ ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ಶುಕ್ರವಾರ ನಡೆದಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮರುಳಕುಪ್ಪೆ ಗ್ರಾಮದ ರಾಮಚಂದ್ರ ಎಂಬುವರ ಮಗ ಕುಮಾರ(24) ದೇಗುಲದ ಹುಂಡಿಗೆ ಕನ್ನ ಹಾಕಿ ಸಿಕ್ಕಿಬಿದ್ದವನು. ಈತ ಇತರೆ ಸಹಚರರೊಂದಿಗೆ ಸೇರಿ ಗ್ರಾಮಗಳ ದೇವಾಲಯಗಳಿಗೆ ಕನ್ನ ಹಾಕುವುದನ್ನು ಕಸುಬಾಗಿ ಮಾಡಿಕೊಂಡಿದ್ದ.[ಹೆಂಡತಿಯ ಕತ್ತು ಕೊಯ್ದು ಕೊಂದ ಉಪನ್ಯಾಸಕ ಪಕ್ಕದಲ್ಲೇ ಕೂತಿದ್ದ]

ನಗರೂರು ಬಳಿ ಗುರುವಾರ ಕುರಿ ಕಾಯುವವರ ವೇಷದಲ್ಲಿ ಬಂದ ಕುಮಾರ ಮತ್ತು ಸುದೀಪ ದೇವಸ್ಥಾನ ಬಳಿ ಅಡ್ಡಾಡುತ್ತಿದ್ದಾಗ ಕಳ್ಳನಿರಬಹುದೆಂದು ಶಂಕಿಸಿದ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ನಾವು ಕುರಿ ಕಾಯುವವರು ಎಂದು ಸಬೂಬು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಆ ನಂತರ ರಾತ್ರಿ ದೇವಸ್ಥಾನದ ಬಾಗಿಲು ಮುರಿದು ಹುಂಡಿ ಕಳ್ಳತನ ಮಾಡಿ, ಹಣ ತೆಗೆದುಕೊಂಡು ಖಾಲಿ ಹುಂಡಿಯನ್ನು ಹರೀನಹಳ್ಳಿ ಬಳಿಯ ಶನೈಶ್ಚರ ದೇವಸ್ಥಾನದ ಹಿಂಭಾಗದ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದರು.
ಇದಾದ ಬಳಿಕ ಕುಮಾರ ಎಂಬಾತ ಯಾರಿಗೂ ಗೊತ್ತಾಗಿಲ್ಲ ಎಂಬ ಧೈರ್ಯದ ಮೇಲೆ ಹರೀನಹಳ್ಳಿ ಗ್ರಾಮಕ್ಕೆ ಬಂದಿದ್ದ ಸಂದರ್ಭ ಆತನನ್ನು ಪತ್ತೆ ಹಚ್ಚಿದ ನಗರೂರು ಗ್ರಾಮಸ್ಥರು ತಮ್ಮ ವಶಕ್ಕೆ ಪಡೆದು ಧರ್ಮದೇಟು ನೀಡಿ, ವಿಚಾರಣೆ ನಡೆಸಿದ್ದಾರೆ.[ಆಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರ, ಒಬ್ಬನ ಬಂಧನ, ಇಬ್ಬರು ನಾಪತ್ತೆ]
ನಾನು ಮತ್ತು ನನ್ನ ಸ್ನೇಹಿತ ಅರಕಲಗೂಡು ತಾಲೂಕಿನ ಮಾದಹಳ್ಳಿ ಗ್ರಾಮದ ಸುದೀಪನೊಂದಿಗೆ ಸೇರಿ ಹುಂಡಿಯನ್ನು ಕಳ್ಳತನ ಮಾಡಿದೆವು. ನಂತರ ಆ ಹಣದಿಂದ ಪಲ್ಸರ್ ಬೈಕ್ ರಿಪೇರಿ ಮಾಡಿಸಿಕೊಂಡೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇದರಿಂದ ಕೆರಳಿದ ಗ್ರಾಮಸ್ಥರು ಇನ್ನಷ್ಟು ತದಕಿ, ಬಳಿಕ ಕಿಕ್ಕೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮರಡಿಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಸದಸ್ಯರಾದ ದೊಡ್ಡಯ್ಯ, ಕೃಷ್ಣೇಗೌಡ, ಮಂಜೇಗೌಡ ಅವರು ಪ್ರಕರಣ ದಾಖಲಿಸಿದ್ದಾರೆ. ಇನ್ನೊಬ್ಬ ಆರೋಪಿ ಮಾದಹಳ್ಳಿ ಗ್ರಾಮದ ಸುದೀಪನ ಪತ್ತೆಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.












Click it and Unblock the Notifications