''ಬಿಜೆಪಿಯಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಹೆಸರೇಳಲು ಒಬ್ಬರೂ ಇಲ್ಲ: ಬಿಕೆ ಹರಿಪ್ರಸಾದ್ ಕಿಡಿ
ಮಂಡ್ಯ, ಆಗಸ್ಟ್ 25 : ''ಬಿಜೆಪಿ ಹಾಗೂ ಸಂಘ ಪರಿವಾರದವರು ಸ್ವಾತಂತ್ರ್ಯ ಹೋರಾಟದ ವಿರುದ್ಧವಾಗಿದ್ದವರು, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಹೆಸರೇಳಲು ಅವರ ಬಳಿ ಒಂದೇ ಒಂದು ಹೆಸರೂ ಇಲ್ಲ. ಕೇವಲ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ 3 ಸಾವಿರ ಅಡಿ ಪ್ರತಿಮೆ ಮಾಡಿ, ಏನೋ ಸಾಧನೆ ಮಾಡಲು ಹೊರಟರು, ಅದು ಸಾಧ್ಯವಾಗಲಿಲ್ಲ'' ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಪಾದಯಾತ್ರೆ ಸಾಗುವ ಸ್ಥಳ ಪರಿಶೀಲನೆ ನಡೆಸಿದ ಅವರು, ಬಳಿಕ ಪಟ್ಟಣದ ಪ್ರವಾಸಿ ಮಂದಿರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡ್ಯ: ನ್ಯಾಯಾಲಯದಿಂದ ಎಸಿಬಿ ರದ್ದು, ಸರ್ಕಾರದ ಗೊಂದಲದಿಂದ ಲೋಕಾಯುಕ್ತ ಅತಂತ್ರ
ಬಿಜೆಪಿಯಿಂದ ಸ್ವಾತಂತ್ರ್ಯ ಹೋರಾಟದ ಆಶಯಗಳು ಹಾಗೂ ಕಾರ್ಯಕ್ರಮಗಳನ್ನ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ. ಅದಕ್ಕಾಗಿ ಧಾರ್ಮಿಕ, ದೇಶಪ್ರೇಮ ತೋರಲು ಹೊರಟಿದ್ದು ಕೋಮುಗಲಭೆಗೆ ಕಾರಣೀಕರ್ತರಾಗಿದ್ದಾರೆ ಎಂದು ಆರೋಪಿಸಿದರು. ಆದರೆ ಕಾಂಗ್ರೆಸ್ ಪಕ್ಷ ಸಂವಿಧಾನಿಕ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ತೋರಲು ಹೊರಟಿದೆ ಎಂದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನ ಹೈ ಕೋರ್ಟ್ ಎತ್ತಿ ಹಿಡಿದಿದ್ದು, ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ಮಟ್ಟವು 4ನೇ ಹಂತವನ್ನು ದಾಟಿದೆ ಎಂದು ಹೇಳಿದೆ. ಸರ್ಕಾರ ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ಸಂಪೂರ್ಣವಾಗಿ ಕುಸಿದಿದೆ ಎಂದರು.
ಕರ್ನಾಟಕ ರಾಜ್ಯವು ಕುವೆಂಪು ಮತ್ತು ಬಸವಣ್ಣರವರ ನಾಡು, ಇಲ್ಲಿ ಕೋಮುವಾದಿಗಳಿಗೆ ಜಾಗವಿಲ್ಲ ಮತದಾರರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಇದಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇತಿಹಾಸ ಸೃಷ್ಟಿಸಿದ ಫಲಿತಾಂಶವೇ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ತನ್ನ ಪ್ರಾಬಲ್ಯ ಹೊಂದಲು ಮದ್ದುಗಳನ್ನು (ಔಷಧಿ) ನೀಡುತ್ತಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮದ್ದು, ಗುಂಡು, ಅಫೀಮು, ಗಾಂಜಾ ಇಂತಹ ವೆಪನ್ಗಳನ್ನು ಬಿಜೆಪಿ ಪಕ್ಷಕ್ಕೆ ಬಿಟ್ಟಿದ್ದೇವೆ. ನಾವು ನಮ್ಮ ಪಕ್ಷದ ಸಾಧನೆ ಹಾಗೂ ಯೋಜನೆಗಳ ರೂಪುರೇಷೆಗಳೊಂದಿಗೆ ಜನರ ಬಳಿ ಹೋಗುತ್ತೇವೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಪಕ್ಷದ ಬಲವರ್ಧನೆಗಾಗಿ ರೈತರ ಸಮಸ್ಯೆಗಳನ್ನು ತೆಗೆದುಕೊಂಡು ಕಿಸಾನ್ ಸಮ್ಮೇಳನ ದಂತಹ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಸ್ಪಂದಿಸುವಂತ ಕೆಲಸ ಹಮ್ಮಿಕೊಂಡಿದ್ದಾರೆ. ಜೊತೆಗೆ ಮೇಕೆದಾಟು ಯೋಜನೆ ಹೋರಾಟದ ಮೂಲಕ ಈ ಭಾಗದ ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದಾರೆ ಎಂದು ಪ್ರಶಂಸಿದರು.
ಸೆಪ್ಟೆಂಬರ್ 7 ರಿಂದ ರಾಹುಲ್ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆಯನ್ನು ಕನ್ಯಾಕುಮಾರಿಯಿಂದ ಆರಂಭಿಸಿ ಕಾಶ್ಮೀರದ ವರೆಗೆ 148 ದಿನಗಳ ಕಾಲ ಸುಮಾರು 3700 ಕಿ.ಮೀ ಸಾಗಲಿದ್ದೇವೆ. ಕರ್ನಾಟಕದಲ್ಲಿ ಗುಂಡ್ಲುಪೇಟೆ, ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ರಾಯಚೂರು ಮಾರ್ಗವಾಗಿ 511 ಕಿ.ಮೀ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ ಜಿಲ್ಲೆಯ ಮುಖಂಡರುಗಳು ಪಾದಯಾತ್ರೆಯ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಿತ್ಯ 25 ಕಿಮೀ ನಡಿಗೆ
ಭಾರತ್ ಜೋಡೋ ಯಾತ್ರೆಯಲ್ಲಿ ನಿತ್ಯ 25 ಕಿ.ಮೀ. ನಡೆಯಲಾಗುತ್ತದೆ. ಭಾರತ್ ಜೋಡೋ ಪಾದಯಾತ್ರೆ ಮೂಲಕ ಬರೋಬ್ಬರಿ 3500 ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಕ್ರಮಿಸಲಿದ್ದು, ಇಡೀ ದೇಶದ ಗಮನಸೆಳೆದಿದೆ. ಆಯ್ದ 12 ರಾಜ್ಯಗಳಲ್ಲಿ ಸಾಗುವ ಪಾದಯಾತ್ರೆ 148 ದಿನ ಮುನ್ನಡೆಯಲಿದೆ. ಈ ಯಾತ್ರೆ ಸಾಗುವ ವೇಳೆ ಅಲ್ಲಲ್ಲಿ ಬಹಿರಂಗ ಸಮಾವೇಶ, ರ್ಯಾಲಿ ಆಯೋಜಿಸಲು ಕಾಂಗ್ರೆಸ್ ಉದ್ದೇಶಿಸಿದೆ.