ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕೇವಲ ಶೇ.39: ಹಿರಿಯ ಸಾಹಿತಿಗಳ ಆತಂಕ
ಮಂಡ್ಯ, ನವೆಂಬರ್6 : ಕೇರಳದಲ್ಲಿ ಶೇ. 92ರಷ್ಟು ಮಲೆಯಾಳಿ ಮಾತನಾಡುವವರಿದ್ದಾರೆ. ತಮಿಳುನಾಡಿನಲ್ಲಿ ತಮಿಳು ಶೇ. 65ರಷ್ಟು, ಆಂಧ್ರಪ್ರದೇಶ-ತೆಲಂಗಾಣದಲ್ಲಿ ತೆಲುಗು ಶೇ. 72ರಷ್ಟಿದ್ದರೆ. ಆದರೆ ಕರ್ನಾಟಕದಲ್ಲಿ ಕೇವಲ ಶೇ 39ರಷ್ಟು ಜನ ಕನ್ನಡ ಮಾತನಾಡುವವರಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ಎಚ್.ಎಸ್. ಮುದ್ದೇಗೌಡ ಆತಂಕ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ವತಿಯಿಂದ ನಡೆದ ಕನ್ನಡ ಹಬ್ಬ, ರಾಜ್ಯ ಮಟ್ಟದ 30ನೇ ಕವಿಕಾವ್ಯ ಮೇಳ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕೇವಲ 25ರಷ್ಟು ಇಲ್ಲ. ಇನ್ನು ರಾಜ್ಯದ ಗಡಿ ಭಾಗದಲ್ಲಿ ಪಕ್ಕದ ಭಾಷಿಕರು ಹೆಚ್ಚಾಗಿರುವುದರಿಂದ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಹೀಗೆ ಮುಂದುವರೆದರೆ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವವರಾರು ಎಂದು ಪ್ರಶ್ನಿಸಿದರು.
ಇನ್ನು ಕರ್ನಾಟಕದಲ್ಲೇ ಕೊಂಕಣಿ, ತುಳು ಸೇರಿ ಸ್ಥಳೀಯ ಭಾಷೆಯೇ 15 ಇದೆ. ಕನ್ನಡ ಉಳಿಸಲು ಅಭಿಯಾನ ಮಾಡುವ ಅವಶ್ಯಕತೆ ಇದೆ. ರಾಜ್ಯದಲ್ಲಿ ಕನ್ನಡ ಶಿಕ್ಷಕರಿಗೆ ಕೇವಲ 10 ರಿಂದ 15 ಸಾವಿರ ವೇತನವಾದರೆ, ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಸರ್ಕಾರಿ ಇಂಜಿನಿಯರ್ಗಳಿಗೆ ಕನಿಷ್ಟ 50 ಸಾವಿರ ವೇತನ ಇದೆ. ಹೀಗಿರುವಾಗ ಕನ್ನಡ ಬೆಳೆಯಲು ಹೇಗೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಕರ್ತ ಬದ್ರುದ್ದೀನ್ ಕೆ.ಮಾಣಿ ಮಾತನಾಡಿ, ಮಾತೃಭಾಷೆ ಕನ್ನಡದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಾಧನೆ ಶೂನ್ಯವಾಗುತ್ತದೆ. ಕನ್ನಡ ಗಟ್ಟಿಗೊಳಿಸುವ ಕೆಲಸದಲ್ಲಿ ಎಲ್ಲರೂ ಭಾಗಿಯಾಗಬೇಕು. ಪರಭಾಷಾ ಏರಿಕೆಯ ಹಾವಳಿಯಿಂದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ಕರೆ ನೀಡಿದರು. ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಭಾಷಾವಾರು ಗಣತಿಯಲ್ಲಿ ಮಾತೃಭಾಷೆಯನ್ನು ಪ್ರತಿಯೊಬ್ಬ ಕರ್ನಾಟಕದ ವಾಸಿ ಕನ್ನಡವೆಂದು ಉಲ್ಲೇಖ ಮಾಡದಿದ್ದರೆ ಕನ್ನಡಕ್ಕೆ ನಿಜಕ್ಕೂ ಕುತ್ತು ಬರಲಿದೆ ಇದರ ಬಗ್ಗೆ ಪ್ರತಿಯೊಬ್ಬರೂ ಗಮನ ಹರಸಿಬೇಕೆಂದು ಮನವಿ ಮಾಡಿದರು.
ಇತ್ತೀಚೆಗೆ ಕಾಂತಾರ ಎಂಬ ಸಿನಿಮಾ ಮೂಲಕ ಕನ್ನಡ ಭಾಷೆ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆಲ ಕನ್ನಡ ಸಿನಿಮಾದಲ್ಲೇ ಹಿಂದಿ, ತೆಲುಗು, ತಮಿಳು ಬಳಸುತ್ತಾರೆ. ಆದರೆ ಕಾಂತಾರ ಸಂಪೂರ್ಣ ಕನ್ನಡ ಭಾಷೆಯಲ್ಲೇ ತಯಾರಾಗಿ ವಿಶ್ವಮಟ್ಟದಲ್ಲಿ ಕನ್ನಡದ ಬಗ್ಗೆ ಚರ್ಚೆಯಾಗುವಂತೆ ಮಾಡಿದೆ. ಈ ಸಿನಿಮಾದ ನಿರ್ಮಾಪಕರು ಮಂಡ್ಯದವರು ಎಂಬುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.

ಈ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ಗೌಡ, ಕವಿಕಾವ್ಯ ಮೇಳದ ಸಮ್ಮೇಳನಾಧ್ಯಕ್ಷೆ ಬಿ.ಆರ್.ಉಮಾ, ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜೇಗೌಡ, ಸಂತೋಷ್, ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.












Click it and Unblock the Notifications