ಉಚಿತ ಬಸ್ ಪಾಸ್ ಕೊಡಿ ಸಾಕು; ಮಂಡ್ಯದ ಕಾಮೇಗೌಡರು
ಮಂಡ್ಯ, ಜುಲೈ 02 : ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಂಡ್ಯದ ಕಾಮೇಗೌಡ ಬಗ್ಗೆ ಮಾತನಾಡಿದ್ದರು. ಈಗ ಕಾಮೇಗೌಡರ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
"ನನಗೆ ಪ್ರಶಸ್ತಿಗಳು ಬೇಡ, ಉಚಿತ ಬಸ್ ಪಾಸು ಸಿಕ್ಕರೆ ಅಕ್ಕ-ಪಕ್ಕದ ಜಿಲ್ಲೆಗಳಲ್ಲಿರುವ ದೇವಾಲಯಗಳಿಗೆ ಭೇಟಿ ನೀಡುವೆ" ಎಂದು 84 ವರ್ಷದ ಕಾಮೇಗೌಡರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಅಭಿನಂದಿಸುತ್ತಿರುವ ರಾಜಕೀಯ ನಾಯಕರು ಬಸ್ ಪಾಸ್ ವ್ಯವಸ್ಥೆ ಮಾಡಲಿದ್ದಾರೆಯೇ? ಕಾದು ನೋಡಬೇಕು.
"ನಾನು ಚಾಮರಾಜನಗರದ ಮಲೆಮಾದೇಶ್ವರ ಬೆಟ್ಟ, ರಾಮನಗರದ ಹನುಮ ದೇವಾಲಯಕ್ಕೆ ಹೋಗುತ್ತಿರುವೆ. ಯಾವುದೇ ಸಮಸ್ಯೆ ಇಲ್ಲದೇ ಸಂಚಾರ ನಡೆಸಲು ಉಚಿತ ಬಸ್ ಪಾಸ್ ಸಿಕ್ಕಿದರೆ ಸಾಕು" ಎಂದು ಕಾಮೇಗೌಡರು ಹೇಳಿದ್ದಾರೆ.

"ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಈಗ ಮಳೆಗಾಲದಲ್ಲಿ ನೀರು ಹೋಗಲು ಜಾಗವಿಲ್ಲದೇ ಪ್ರವಾಹ ಉಂಟಾಗುತ್ತದೆ. ಸರ್ಕಾರ ಮರಗಳನ್ನು ಕಡಿದು, ಕೆರೆಗಳನ್ನು ಮುಚ್ಚಿದ್ದು ಇದಕ್ಕೆ ಕಾರಣವಾಗಿದೆ" ಎಂದು ಕಾಮೇಗೌಡರು ಪ್ರಸ್ತುತ ಸ್ಥಿತಿಯ ಕುರಿತು ಮಾತನಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ಕಾಮೇಗೌಡರ ಹೆಸರು ಈಗ ರಾಷ್ಟ್ರ ಮಟ್ಟದಲ್ಲಿ ಕೇಳಿ ಬರುತ್ತಿದೆ. ಪ್ರಾಣಿಗಳ ಕುಡಿಯುವ ನೀರಿನ ದಾಹ ನೀಗಿಸಲು ಗೌಡರು 16 ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರಧಾನಿ ಮೋದಿ ಮನ್ ಕೀ ಬಾತ್ ತಿಂಗಳ ರೇಡಿಯೋ ಕಾರ್ಯಕ್ರಮದಲ್ಲಿ ಕಾಮೇಗೌಡರ ಕಾರ್ಯವನ್ನು ಹೊಗಳಿದ್ದರು.
ಕಾಮೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಲಾಗುತ್ತಿದೆ. ಈ ಕುರಿತು ಮಾತನಾಡಿದ ಗೌಡರು, "ಪದ್ಮ ಪ್ರಶಸ್ತಿ ಬಗ್ಗೆ ನನಗೆ ಗೊತ್ತಿಲ್ಲ. ಸಾಲುಮರದ ತಿಮ್ಮಕ್ಕ ದೆಹಲಿಯಲ್ಲಿ ಅದನ್ನು ಪಡೆದರು ಎಂದು ಮಾತ್ರ ತಿಳಿದಿದೆ" ಎಂದರು.
ಪದ್ಮ ಪ್ರಶಸ್ತಿ ಬಂದರೆ ಏನು ಮಾಡುವಿರಿ ಎಂದು ಕೇಳಿದಾಗ ಕಾಮೇಗೌಡರು, "ಇನ್ನೂ ಎರಡು ಕೆರೆಗಳನ್ನು ಕಟ್ಟಿಸುತ್ತೇನೆ" ಎಂದು ಹೇಳಿದ್ದಾರೆ.












Click it and Unblock the Notifications